I ಸಾಗರ ಜಿಲ್ಲೆ ಘೋಷಣೆಗೆ I ಮುಖ್ಯಮಂತ್ರಿ ಭೇಟಿ ಮಾಡಿ ಮನವಿ ಮಾಡಿದ್ದೇನೆ I ಶಾಸಕ ಗೋಪಾಲಕೃಷ್ಣ ಬೇಳೂರು I
ಸಾಗರ : ಜಿಲ್ಲೆಯಾಗುವ ಅರ್ಹತೆ ಸಾಗರಕ್ಕೆ ಇದೆ,ನಾನು ಶಾಸಕನಾಗಿ ನಿಮ್ಮ ಹೋರಾಟದ ಜೊತೆಗೆ ಇರುತ್ತೇನೆ.
ಈಗಾಗಲೇ ಸಾಗರ ಜಿಲ್ಲೆಯಗಬೇಕು ಎಂದು ಮುಖ್ಯಮಂತ್ರಿ ಗಳಿಗೆ ಪತ್ರ ಬರೆದು ಒತ್ತಾಯಿಸಿದ್ದೇನೆ,ಮುಖ್ಯಮಂತ್ರಿ ಭೇಟಿ ಮಾಡಿ ಮನವಿ ಮಾಡಿದ್ದೇನೆ ಎಂದು ಶಾಸಕ ಹಾಗೂ ಅರಣ್ಯಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.
ಅವರು ಸಾಗರದ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಸಾಗರ ಜಿಲ್ಲಾ ಹೋರಾಟ ಸಮಿತಿ ಆಶ್ರಯದಲ್ಲಿ ಸಾಗರ ಉಪವಿಭಾಗೀಯ ಕೇಂದ್ರ ಸ್ಥಾನ ಸಾಗರವನ್ನು ನೂತನ ಜಿಲ್ಲೆಯನ್ನಾಗಿ ಘೋಷಿಸ ಬೇಕು ಎಂದು ಒತ್ತಾಯಿಸಿ ಆರಂಭಿಸಿರುವ ಅನಿರ್ಧಿ ಷ್ಠಾವಧಿ ಧರಣಿ ಸತ್ಯಾಗ್ರಹದ ೩ನೇ ದಿನ ದೂರವಾಣಿ ಮೂಲಕ ಹೋರಾಟಗಾರರನ್ನು ಸಂಪರ್ಕಿಸಿ ಭರವಸೆಯ ಮಾತುಗಳಿಂದ ಹೋರಾಟ ಧರಣಿ ನಿಲ್ಲಿಸುವಂತೆ ಮನವಿ ಮಾಡಿದರು.
ಮುಂದಿನ ದಿನಗಳಲ್ಲಿ ಸಾಗರ ಜಿಲ್ಲೆಯನ್ನಾಗಿ ಘೋಷಿಸುವಂತೆ ಸರ್ಕಾರದ ಗಮನಸೆಳೆಯುವ ಕಾರ್ಯಕ್ರಮಗಳಿಗೆ ನಿಮ್ಮೊಂದಿಗೆ ಸಮಾಲೋಚಿಸಿ ಸಾಗರ ಜಿಲ್ಲೆಯಾಗುವ ದಿಕ್ಕಿನಲ್ಲಿ ಶಾಸಕನಾಗಿ ಹೋರಾಟದ ಜೊತೆಗೆ ಇರುತ್ತೇನೆ ಎಂದು ಗೋಪಾಲಕೃಷ್ಣ ಬೇಳೂರು ದೂರವಾಣಿ ಮೂಲಕ ಹೋರಾಟದ ಸಮಿತಿ ಅವರೊಂದಿಗೆ ಮೊಬೈಲ್ ಲೌಡ್ ಸ್ಪೀಕರ್ ಆನ್ ಮೂಲಕ ಭರವಸೆ ನೀಡಿದರು.
ಸಾಗರ ಉಪವಿಭಾಗಾಧಿಕಾರಿಗಳು ಸಾಗರ ಉಪವಿಭಾಗೀಯ ಕೇಂದ್ರ ಸ್ಥಾನ ಸಾಗರವನ್ನು ನೂತನ ಜಿಲ್ಲೆಯನ್ನಾಗಿ ಘೋಷಿಸ ಬೇಕು ಎಂದು ಒತ್ತಾಯಿಸಿ ಆರಂಭಿಸಿರುವ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹದ ೩ನೇ ದಿನದ ಹೋರಾಟದ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿ ಹೋರಾಟದ ಉದ್ದೇಶ ಹಾಗೂ ಲಿಖಿತ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮತ್ತು ಕಂದಾಯ ಸಚಿವರುಗಳಿಗೆ ತಲುಪಿಸುತ್ತೇನೆ ಎಂದರು. ಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಸೆ ಚಂದ್ರಪ್ಪ ಮಾತನಾಡಿ ಸಾಗರಕ್ಕೆ ೪ ತಾಲ್ಲೂಕಿನಿಂದ ಉಪವಿಭಾಗೀಯ ಕೇಂದ್ರ ಕಚೇರಿಗಳ ಕೆಲಸಕ್ಕಾಗಿ ನಾಗರಿಕರು ಆಗಮಿಸುತ್ತಿದ್ದಾರೆ.ಸಾಗರ ಜಿಲ್ಲೆಯಾಗುವುದರಿಂದ ನಾಗರಿಕರುಗಳಿಗೆ ಅನುಕೂಲಗಳಾಗುತ್ತವೆ.ಪ್ರಸ್ತುತ ಸಾಗರವನ್ನು ಜಿಲ್ಲೆಯನ್ನಾಗಿ ಘೋಷಿಸಲು ಉತ್ತಮ ವಾತವರಣವಿದೆ ಎಂದು ಹೇಳಿದರು.
ಸಾಗರ ಜಿಲ್ಲಾ ಹೋರಾಟ ಸಮಿತಿ ಕಳೆದ ಹಲವು ದಿನಗಳಿಂದ ಆಸಕ್ತಿ ಮತ್ತು ಶ್ರದ್ದೆಯಿಂದ ಕೆಲಸ ಮಾಡುತ್ತಿದೆ.ಹೋರಾಟದ ಕಾವು ಏರುತ್ತಿದೆ.ಎಲ್ಲಾ ರಾಜಕೀಯ ಪಕ್ಷಗಳ ಪ್ರಮುಖರುಗಳು ಸಾಗರ ಜಿಲ್ಲೆಯಾಗಬೇಕು ಎಂಬ ಉದ್ದೇಶದಿಂದ ಸಾಮೂಹಿಕವಾಗಿ ಬೆಂಬಲಿಸಿರುವುದು ಉತ್ತಮ ಬೆಳವಣಿಗೆಯಾಗಿದೆ.ಹೋರಾಟ ದೊಡ್ಡಮಟ್ಟದಲ್ಲಿ ಜನಸೇರಿಸಿ ಸಾಗರದ ಎಲ್ಲಾ ರಸ್ತೆಗಳು ಬಂದ್ ಆಗುವಂತಹ ಬೃಹತ್ ಪ್ರತಿಭಟನೆ ಮಾಡಬೇಕು ಎಂಬ ಸಲಹೆ ನೀಡಿದರು. ನಗರಸಭೆ ಅಧ್ಯಕ್ಷೆ ಮೈತ್ರಿಪಾಟೀಲ್ ಮಾತನಾಡಿ ಸಾಗರ ಉಪವಿಭಾಗೀಯ ಕೇಂದ್ರ ಸ್ಥಾನ ಸಾಗರವನ್ನು ಜಿಲ್ಲೆಯನ್ನಾಗಿ ಘೋಷಿಸಬೇಕು ಎಂಬ ಆಶಯ ಸಾಗರ ಉಪವಿಭಾಗೀಯ ಕ್ಷೇತ್ರದ ಎಲ್ಲಾ ನಾಗರೀಕರುಗಳ ಸಾಮೂಹಿಕ ಅಭಿಪ್ರಾಯವಾಗಿದೆ ಎಂದರು.
ಸರ್ಕಾರ ಸಾಗರ ಜಿಲ್ಲಾ ಹೋರಾಟ ಸಮಿತಿಯ ಮನವಿಯನ್ನು ಪುರಸ್ಕರಿಸಿ ತಕ್ಷಣ ಸಾಗರವನ್ನು ನೂತನ ಜಿಲ್ಲೆಯನ್ನಾಗಿ ಘೋಷಿಸಬೇಕು.ಸರ್ಕಾರದ ಗಮನಸೆಳೆಯಲು ಹೋರಾಟವನ್ನು ತೀವ್ರಗೊಳಿಸುವುದು ರಸ್ತೆ ತಡೆ ಮಾಡುವುದು ದೇರಿದಂತೆ ಮುಂದಿನ ಹಂತದ ಎಲ್ಲಾ ಹೋರಾಟಕ್ಕೂ ನಗರಸಭೆ ಸದಸ್ಯರುಗಳು,ರಾಜಕೀಯ ಪಕ್ಷಗಳ ಸದಸ್ಯರುಗಳ ಬಿಜೆಪಿ ತಂಡ ನಿಮ್ಮ ಜೊತೆಗೆ ಇರುತ್ತದೆ ಎಂದು ಭರವಸೆ ನೀಡಿದರು.
ಜೆಪಿಜೆಡಿ ( ಜಯ್ ಪ್ರಕಾಶ್ ಜನತಾ ದಳ ) ಪಕ್ಷದ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಅಕ್ಬರ್ ಖಾನ್ ಅವರು ಮಾತನಾಡಿ ಸಾಗರ ಜಿಲ್ಲೆಯಾಗಬೇಕು ಎಂಬ ಬೇಡಿಕೆ ನ್ಯಾಯಯುತವಾಗಿದೆ.ಸಾಮೂಹಿಕ ನಾಯಕತ್ವದಲ್ಲಿ ಸಮಸ್ತ ನಾಗರಿಕರುಗಳ ಬೆಂಬಲದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲವಿದೆ ಎಂದು ಘೋಷಿಸಿದರು.

