I ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳ “ಡೊನೇಷನ್ ದಂಧೆ” I ಮಾನವ ಹಕ್ಕುಗಳ ನ್ಯಾಯ ಮಂಡಳಿ ಆಗ್ರಹ.I
ಶಿವಮೊಗ್ಗ : ಪ್ರಸಕ್ತ ಶೈಕ್ಷಣಿಕ ಸಾಲು ಆರಂಭವಾಗಿರುವ ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಲ್ಲಿ ಕಾರ್ಯಾಚರಿಸುತ್ತಿರುವ ಬಹುತೇಕ ಪ್ರಭಾವಿ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳು ಶಿಕ್ಷಣವನ್ನು ಸಂಪೂರ್ಣವಾಗಿ ವ್ಯಾಪಾರೀಕರಣಗೊಳಿಸಿದ್ದು, ಜ್ಞಾನದ ದೇಗುಲವಾಗಬೇಕಿದ್ದ ಸಂಸ್ಥೆಗಳು ಲೂಟಿ ಕೇಂದ್ರಗಳಾಗಿ ಮಾರ್ಪಟ್ಟಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ ಎಂದು ಮಾನವ ಹಕ್ಕುಗಳ ನ್ಯಾಯ ಮಂಡಳಿಯ (HRJC) ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ಎನ್.ಎಂ. ಸಿಬ್ಗತ್ ಉಲ್ಲಾ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೋಷಕರ ರಕ್ತ ಹೀರುತ್ತಿರುವ ಖಾಸಗಿ ಶಿಕ್ಷಣ ಮಾಫಿಯಾದ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಇಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ, ಸಾರ್ವಜನಿಕ ಹಿತರಕ್ಷಣಾ ದೂರನ್ನು ಸಲ್ಲಿಸಲಾಯಿತು,
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಉಪಾಧ್ಯಕ್ಷರಾದ ಸಿಬ್ಗತ್ ಉಲ್ಲಾ ಅವರು, “ಪ್ರಸ್ತುತ ಖಾಸಗಿ ಶಾಲೆಗಳು ಸರ್ಕಾರದ ಯಾವುದೇ ನಿಯಮಾವಳಿಗಳಿಗೆ ಹಾಗೂ ಆದೇಶಗಳಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಶಾಲಾ ಪ್ರವೇಶಾತಿ (Admission) ಸಂದರ್ಭದಲ್ಲಿ ಪೋಷಕರಿಂದ ಯಾವುದೇ ರಶೀದಿ ಇಲ್ಲದೆ ಲಕ್ಷಾಂತರ ರೂಪಾಯಿಗಳನ್ನು ‘ಡೊನೇಷನ್’ ರೂಪದಲ್ಲಿ ಕಡ್ಡಾಯವಾಗಿ ವಸೂಲಿ ಮಾಡಲಾಗುತ್ತಿದೆ. ಇದರೊಂದಿಗೆ ‘ಕಟ್ಟಡ ಅಭಿವೃದ್ಧಿ ಶುಲ್ಕ’, ‘ಸ್ಮಾರ್ಟ್ ಕ್ಲಾಸ್ ಶುಲ್ಕ’, ‘ಪಠ್ಯಪುಸ್ತಕ ಹಾಗೂ ಸಮವಸ್ತ್ರ ಶುಲ್ಕ’ ಎಂಬ ಹತ್ತಾರು ಸುಲಿಗೆಯ ಮಾರ್ಗಗಳನ್ನು ಸೃಷ್ಟಿಸಿ, ಮಧ್ಯಮ ಮತ್ತು ಬಡ ಕುಟುಂಬಗಳ ರಕ್ತವನ್ನು ಹೀರುತ್ತಿದ್ದಾರೆ. ಹೆತ್ತವರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಸಾಲಸೂಲ ಮಾಡಿ, ಒಡವೆಗಳನ್ನು ಅಡವಿಟ್ಟು ಈ ಖಾಸಗಿ ಮಾಫಿಯಾಗೆ ಹಣ ಉಣಿಸಬೇಕಾದ ದುಸ್ಥಿತಿ ನಿರ್ಮಾಣವಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
SIT ತನಿಖೆ ಹಾಗೂ ಸಹಾಯವಾಣಿ ಕೇಂದ್ರ ಸ್ಥಾಪನೆಗೆ ಕಟ್ಟುನಿಟ್ಟಿನ ಆಗ್ರಹ
:
ದೂರು ಸಹಾಯವಾಣಿ ಕೇಂದ್ರ ಸ್ಥಾಪನೆ:ಖಾಸಗಿ ಶಾಲೆಗಳ ಶುಲ್ಕ ಸುಲಿಗೆ ಹಾಗೂ ದೌರ್ಜನ್ಯದ ವಿರುದ್ಧ ಪೋಷಕರು ಮುಕ್ತವಾಗಿ ತಮ್ಮ ದೂರುಗಳನ್ನು ದಾಖಲಿಸಲು ಜಿಲ್ಲಾ ಮಟ್ಟದಲ್ಲಿ ತಕ್ಷಣವೇ ಅಧಿಕೃತವಾದ ದೂರು ಸಹಾಯವಾಣಿ ಕೇಂದ್ರ ಅನ್ನು ಜಿಲ್ಲಾಡಳಿತ ಆರಂಭಿಸಬೇಕು.
ವಿಶೇಷ ತನಿಖಾ ದಳ (SIT) ರಚನೆ, ಶಿಕ್ಷಣ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಲಕ್ಷಾಂತರ ರೂಪಾಯಿ ಹಣ ಲೂಟಿ ಮಾಡುತ್ತಿರುವ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಅಕ್ರಮ ದಂಧೆಯ ಸಮಗ್ರ ತನಿಖೆಗಾಗಿ ತಕ್ಷಣವೇ “ವಿಶೇಷ ತನಿಖಾ ದಳ (SIT) ಅನ್ನು ರಚನೆ ಮಾಡಬೇಕು.
ಕಾನೂನಾತ್ಮಕ ಅಂಶಗಳು ಮತ್ತು ಉಲ್ಲಂಘನೆಗಳು:
RTE ಕಾಯ್ದೆ 2009ರ ಸೆಕ್ಷನ್ 13ರ ಸ್ಪಷ್ಟ ಉಲ್ಲಂಘನೆ, ಪ್ರವೇಶಾತಿ ವೇಳೆ ಯಾವುದೇ ರೀತಿಯ ಕ್ಯಾಪಿಟೇಷನ್ ಫೀಸ್ ಅಥವಾ ಡೊನೇಷನ್ ಪಡೆಯುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ನಿಯಮ ಮೀರಿ ದೇಣಿಗೆ ಪಡೆದರೆ, ಪಡೆದ ಮೊತ್ತದ 10 ಪಟ್ಟು ದಂಡವನ್ನು ಶಿಕ್ಷಣ ಸಂಸ್ಥೆಗೆ ವಿಧಿಸಲು ಕಾನೂನಿನಲ್ಲಿ ಸ್ಪಷ್ಟ ಅವಕಾಶವಿದೆ.ಎಂದು ತಿಳಿಸಿದ್ದಾರೆ,
ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಉಲ್ಲಂಘನೆ: ಖಾಸಗಿ ಶಾಲೆಗಳು ತಮಗೆ ಇಷ್ಟಬಂದಂತೆ ಶುಲ್ಕ ಹೆಚ್ಚಿಸುವಂತಿಲ್ಲ. ಸರ್ಕಾರದ ಶುಲ್ಕ ನಿಯಂತ್ರಣ ಸಮಿತಿಯ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಅನಧಿಕೃತ ಶುಲ್ಕ ವಸೂಲಾತಿಯು ಈ ಕಾಯ್ದೆಯಡಿ ಗುರುತರ ಅಪರಾಧವಾಗಿದೆ.
ಈ ದೂರಿನ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (DDPI) ತಕ್ಷಣವೇ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಂಸ್ಥೆಯು ಆಗ್ರಹಿಸಿದೆ.
ಒಂದು ವೇಳೆ ಸರ್ಕಾರ ಮತ್ತು ಜಿಲ್ಲಾಡಳಿತ ಈ ತಕ್ಷಣದ ಲೂಟಿಯನ್ನು ತಡೆಯದಿದ್ದರೆ ಹಾಗೂ ಸಹಾಯವಾಣಿ ಮತ್ತು ಎಸ್ಐಟಿ (SIT) ರಚನೆಗೆ ಮುಂದಾಗದಿದ್ದರೆ, ಜಿಲ್ಲೆಯಾದ್ಯಂತ ಪೋಷಕರನ್ನು ಒಗ್ಗೂಡಿಸಿ ಬೃಹತ್ ಸಾರ್ವಜನಿಕ ಹೋರಾಟ ರೂಪಿಸಲಾಗುವುದು ಎಂದು ಪದಾಧಿಕಾರಿಗಳು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ, ಮಾಧ್ಯಮ ವಿಭಾಗ, ಮಾನವ ಹಕ್ಕುಗಳ ನ್ಯಾಯ ಮಂಡಳಿ (HRJC), ಕರ್ನಾಟಕ ರಾಜ್ಯ ಘಟಕದ ಉಪಾಧ್ಯಕ್ಷರಾದ ಎನ್.ಎಂ ಸಿಬ್ಗತ್ ಉಲ್ಲಾ ಹಾಗೂ ಪದಾಧಿಕಾರಿಗಳಾದ ಲೋಕೇಶ್. ದೇವರಾಜ್ ಇನ್ನಿತರರು ಉಪಸ್ಥಿತರಿದ್ದರು

