ಶಿವಮೊಗ್ಗ: ಭಾರತೀಯ ಸಂವಿಧಾನವು ಮಹಿಳೆಯರಿಗೆ ಸಮಾನ ಹಕ್ಕು ಮತ್ತು ಗೌರವ ನೀಡುತ್ತದೆ. ಕಾನೂನಿನಲ್ಲಿ ಸಮಾನತೆ, ಭೇದಭಾವಕ್ಕೆ ನಿಷೇಧ ಮತ್ತು ಉದ್ಯೋಗದಲ್ಲಿ ಸಮಾನ ಅವಕಾಶಗಳನ್ನು ನೀಡಲಾಗಿದೆ ಎಂದು ಕುವೆಂಪು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯೆ ಪ್ರೊ. ಸಾಕಮ್ಮ ಹೇಳಿದರು.
ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಿದ್ದ ಸಂವಿಧಾನ ದಿನ ಆಚರಣೆ 2025 ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಿಳೆಯರ ಪ್ರಗತಿಗಾಗಿ ಸರ್ಕಾರ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಲು ಸಂವಿಧಾನ ಅವಕಾಶ ನೀಡಿರುವುದರಿಂದ ಮಹಿಳಾ ಮೀಸಲಾತಿ ಮುಖ್ಯವಾಗಿಸಿದೆ. ಸ್ಥಳೀಯ ಸಂಸ್ಥೆಗಳಲ್ಲಿನ ಮೀಸಲಾತಿ ಸ್ಥಾನಗಳಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಹಂಚಿಕೆಯಾಗಬೇಕು. ಇದರಿಂದ ಮಹಿಳೆಯರ ರಾಜಕೀಯ ಪ್ರತಿನಿಧಿತ್ವವನ್ನು ಬಲಪಡಿಸುವುದಷ್ಟೇ ಅಲ್ಲ, ಸಮಾನ ಹಾಗೂ ಅಭಿವೃದ್ಧಿಯುತ ಸಮಾಜ ನಿರ್ಮಾಣಕ್ಕೂ ಸಹಕಾರಿಯಾಗಿದೆ. ಸಂವಿಧಾನ ದಿನವು ನಾವು ಲಿಂಗ ಸಮಾನತೆ ಮತ್ತು ಮಹಿಳಾ ಸಶಕ್ತೀಕರಣಕ್ಕೆ ಬದ್ಧರಾಗಬೇಕೆಂಬ ಸಂದೇಶವನ್ನು ನೀಡಿದೆ ಎಂದರು.
ಕುವೆಂಪು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಮುಸಾವೀರ್ ಪಾಷಾ ಮಾತನಾಡಿ, ಡಾ. ಬಿ. ಆರ್. ಅಂಬೇಡ್ಕರ್ ಅವರ ಸಂವಿಧಾನ ಸಂಕಲ್ಪವು ಸಾಮಾಜಿಕ ಪರಿವರ್ತನೆಯ ದಾರಿ. ಅವರು ನೀಡಿದ ಸಮಾನತೆ, ನ್ಯಾಯ, ಮಹಿಳಾ ಹಕ್ಕುಗಳು ಮತ್ತು ಮೀಸಲಾತಿಯ ತತ್ವಗಳು ಇಂದಿನ ಭಾರತವನ್ನು ಸಮಾನತೆ ಆಧಾರಿತ ಸಮಾಜದತ್ತ ನಡೆಸವ ಪ್ರಮುಖ ಶಕ್ತಿ. ಮಹಿಳಾ ಶಿಕ್ಷಣ ಮತ್ತು ಮೀಸಲಾತಿ ವ್ಯವಸ್ಥೆಗಳು ಅವರ ಚಿಂತನೆಯ ನೇರ ಪ್ರತಿಫಲನವಾಗಿವೆ ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸುರೇಶ ಮಾತನಾಡಿ, ಭಾರತೀಯ ಸಂವಿಧಾನವು ಸಮಾಜ ಕಲ್ಯಾಣ ಇಲಾಖೆಯತಂಹ ಸಂಸ್ಥೆಗಳಿಂದ ಮೀಸಲಾತಿ ನೀತಿಗಳನ್ನು ಜಾರಿಗೆ ತರುವ ಮೂಲಕ ಮಹಿಳೆ, ಮಕ್ಕಳ ಮತ್ತು ಹಿಂದುಳಿದ ಸಮುದಾಯಗಳಿಗಾಗಿ ವಿದ್ಯಾರ್ಥಿ ವೇತನ, ಉದ್ಯೋಗ, ವಸತಿ, ಆರೋಗ್ಯ ಮತ್ತು ಕುಟುಂಬಾಭಿವೃದ್ಧಿ ಯೋಜನೆಗಳನ್ನು ಒದಗಿಸುತ್ತದೆ. ಐ. ಎ. ಎಸ್, ಕೆ. ಎ. ಎಸ್ ಹುದ್ದೆಗಳಿಗೆ ತರಬೇತಿ ನೀಡುತ್ತಿದೆ. ಸಮಾಜದಲ್ಲಿ ಸಮಾನತೆ, ಅಭಿವೃದ್ಧಿ ಮತ್ತು ಸಬಲೀಕರಣವನ್ನು ಬೆಳೆಸುತ್ತದೆ ಎಂದು ಹೇಳಿದರು.
ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಪ್ರೊ. ಎಂ.ವೆಂಕಟೇಶ್ ಮಾತನಾಡಿ, ವಿದ್ಯಾರ್ಥಿಗಳು ಸಂವಿಧಾನದ ಅರಿವು, ಹಕ್ಕು, ಕರ್ತವ್ಯಗಳ ಬಗ್ಗೆ ಮತ್ತು ಸೌಲಭ್ಯಗಳ ಬಗ್ಗೆ ಮತ್ತು ಭವಿಷ್ಯತ್ತಿನ ಭಾರತದ ನಿರ್ಮಾಣಕ್ಕಾಗಿ ಮಾಹಿತಿ ಹೊಂದಿರುವುದು ಅಗತ್ಯ. ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ನಮ್ಮ ಸಂವಿಧಾನದ ತಿಳವಳಿಕೆ ಅತ್ಯಗತ್ಯ ಎಂದು ಹೇಳಿದರು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ದುರಗಪ್ಪ ಮುಂಡಗಿ, ಪ್ರಾಧ್ಯಾಪಕರಾದ ಡಾ. ಸುರೇಶ್ ಆರ್., ಅಭಿಷೇಕ್ ಜಿ.ಎಸ್., ಸಂತೋಷ್ ಕುಮಾರ್.ಕೆ.ಹೆಚ್, ಡಾ. ಶಿವರುದ್ರಪ್ಪ, ಡಾ. ಅರುಣಕುಮಾರ ಹಾಗೂ ಇತರ ಅಧ್ಯಾಪಕರು ಉಪಸ್ಥಿತರಿದ್ದರು.

