ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಜ್ಞಾನವು ಶಾಶ್ವತವಲ್ಲ ಅಜ್ಞಾನವೂ ಶಾಶ್ವತವಲ್ಲ..! ಬೆತ್ತಲಿನ ಅರಿವುಗಳೂ I
ಇಂತಹದೊಂದು ತಲೆಬರಹವಿಡಿದು ಹೊರಟಿದ್ದೆಲ್ಲಿಗೆ…? ಎಂದು ಯಾರಾದರೂ ಪ್ರಶ್ನಿಸಿದರೆ .. ನಾನು ವಿಪರೀತ ಜ್ಞಾನಿಗಳನ್ನು ದರ್ಶಿಸಿ ಕ್ಷಮಾಪಣೆ ಕೇಳಲೊರಟಿದ್ದೇನೆ ಎಂದು ಉವಾಚಿಸುತ್ತೇನೆ, ಲೋಕದ ಸಂಗತಿಗಳನ್ನು ಅರಿತಿರುವ ಲೋಕಜ್ಞಾನಿಗಳನ್ನು ಕಾಣಲೊರಟಿದ್ದೇನೆ, ಯಾವುದೇ ಕಟ್ಟುಪಾಡುಗಳಿರಲಿ ಆ ಹೊತ್ತಿಗೆಯ ಪರಿವಿಡಿಯಿಂದ ಕೊನೆ ಹಾಳೆಯ ಸಾಲಿನ ತನಕದಿ ಕರತಲಾಮಲಕ ಮಾಡಿಕೊಂಡಿರುವ ಪ್ರಬುದ್ದ ಅರಿವಿನ ಜ್ಞಾನಿಯ ಪಾದಸ್ಪರ್ಶ ಮಾಡಿ ಪುನೀತನಾಗಲೊರಟಿದ್ದೇನೆ,
ರಂಗವೇದಿಕೆಯ ಪಾತ್ರಧಾರಿಯಂತೆ ನಿಜದ ಬದುಕಿನಲ್ಲಿಯೂ ನಟಿಸುವ ಹಾಗೂ ಕೀಲುಗೊಂಬೆಯಂತೆ ಕುಣಿದು ಮನ-ತಣಿಸುವ ಕಲಾವಿದರನ್ನು ಹುಡುಕಲೊರಟಿದ್ದೇನೆ, ಇಂತಹ ಹಲವು ಮಜಲುಗಳಲ್ಲಿರುವ ಜ್ಞಾನಿಗಳನ್ನು ದರ್ಶಿಸಲೊರಟಿದ್ದೇನೆ ಎಂದು ನಿರರ್ಗಳವಾಗಿ ಉತ್ತರಿಸಲು ಬದ್ದನಾಗುತ್ತೇನೆ.ಯಾವ ಪುರಾಷರ್ಥಕ್ಕೆ ಇಂತಹ ಟಿಪ್ಪಣಿಗಳೆಂದು ಓದುಗರು ಮನಸಿನಲ್ಲಿ ತಿಳಿದುಕೊಂಡರೆ ಕೊನೆಯ ಸಾಲುಗಳ ತನಕ ಮನನ ಮಾಡಿಕೊಂಡರೆ ಎಲ್ಲವು ತಿಳಿದು ಬಿಡುತ್ತದೆ ನಾವೆಷ್ಟು ಜ್ಞಾನಿಗಳೆಂದು..! ಇರಲಿ ಇದರ ಕುರಿತಾಗಿ ಮತ್ತಷ್ಟು ತಿಳಿದುಕೊಳ್ಳುವ ಮುನ್ನದಿ ಜೀವಂತ ಉದಾಹರಣೆಯೊಂದು ಲಗತ್ತಿಸುತ್ತಿದ್ದೇನೆ
“ಅವಕಾಶ” Opportunity ಎಂಬುದು ಎಲ್ಲರ ವಿಳಾಸಕ್ಕೆ ಬರುವ ಕಾಗದವಿದ್ದಂತೆ, ಇದನ್ನು ಸದುಪಯೋಗ ಪಡಿಸಿಕೊಂಡರೆ ಒಳಿತು ಒಮ್ಮೆಲೆ ಮೇರು ಶಿಖರ ಅದೆಷ್ಟೇ ಕಡಿದಾಗಿದ್ದರು ಏರಿ ಯಶಸ್ಸಿನ ಪತಾಕೆ ಹಾರಿಸಿ ಬಿಡಬಹುದು, ದುರುಪಯೋಗವೇ ಆಗಿ ಈ ಮೇಲಿನಂತೆ ಜ್ಞಾನಿಗಳಾದರೆ ಕಾಲಚಕ್ರದ ಸುಳಿಗೆ ಸಿಲುಕುವ ಮತ್ತೊಂದು ಕಸವಾಗಬಹುದು, ಎಂದು ತಿಳಿಸಿ ಉದಾಹರಣೆಗೆ ಬರುತ್ತೇನೆ, ಅಂದು ಬೆಳ್ಳಂ ಬೆಳಿಗ್ಗೆ ಯೋಗ-ಧ್ಯಾನದ ಅಮಲಿನಲಿನಲ್ಲಿ “ಆಸ್ತ” ಟಿವಿ ಚಾನೆಲ್ ಹಾಕಿ ಕುಳಿತಿದ್ದೆ ಸಮಯ ೫.೩೦ ಇರಬಹುದು ಉಪನ್ಯಾಸದ ಕಾರ್ಯಕ್ರಮ ಶುರುವಾಗಿತ್ತು, ಆಕೆ ಸಂತರ ಸಾಲಿನಲ್ಲಿ ಕೂತಿದ್ದಳು ಮಾತಾಡುವುದಕ್ಕೆ ಶುರುಮಾಡಿ ಈ ನಿಜದ ಘಟನೆಯನ್ನು ತಿಳಿಸಿದಳು,
ಅದೊಂದು ಕಾಶಿಯಲ್ಲಿ ನಡೆವ ಬೃಹತ್ ‘ಸಂತರ ಸಮಾವೇಶ’ ಸನ್ಯಾಸಿಯೋರ್ವ ಬಹಳ ಜ್ಞಾನಿಯಾಗಿದ್ದರು, ಎಲ್ಲರಿಗಿಂತಲೂ ಭಿನ್ನತೆಯಿಂದ ಉಪನ್ಯಾಸವನ್ನು ಉಣಬಡಿಸುತ್ತಿದ್ದರು, ಅವರಿಗೆ ವಿಶೇಷವಾಗಿ ಉಪಚರಿಸಬೇಕಿತ್ತು, ನಾನು-ನನ್ನಿಂದಲೇ ಈ ಸಂತರ ಸಮಾವೇಶ ನಡೆಯುತ್ತಿದೆ ನಾನಿಲ್ಲದಿದ್ದರೆ ಇದು ನಡೆಯದು, ಕಳೆ ಬರದು, ಎಂದು ಬಲು ಬೀಗಿವಿನಿಂದಲೇ ವರ್ತಿಸುತ್ತಿದ್ದರು, ಅದು ಜ್ಞಾನಮತಿ ಎಂದು ಅಂದುಕೊಂಡಿದ್ದರು ಅರಿವಿನ ಸಾಗರದಲ್ಲಿದ್ದವರ ಆತ್ಮಗಳಲ್ಲಿ ಇದೊಂದು ಅಲ್ಪಮತಿಯ ವರ್ತನೆ ಎನ್ನುವುದು ಗೊತ್ತಿದ್ದರೂ ಕಾಲದ ಸುಳಿಯ ಮೇಲೆ ಹಾಕಿ ಮೌನವಾಗಿ ಹೆದರಿಕೊಳ್ಳುತ್ತಿದ್ದರು, ದೂರ ಸರಿದು ಆ ಜ್ಞಾನಿ ಸನ್ಯಾಸಿಗೆ ಅಡ್ಡಲಾಗಿ ನಮಸ್ಕರಿಸುತ್ತಿದ್ದರು, ಕೆಲವು ವರ್ಷಗಳು ಕಳೆಯಿತು, ಕಳೆದ ವರ್ಷ ಮತ್ತೇ ಸಂತರ ಸಮಾವೇಶಕ್ಕೆ ಹೋಗಿದ್ದೇವು, ಅಚಾನಕ್ ಆ ಸನ್ಯಾಸಿ ಅಲ್ಲಿ ಇರಲಿಲ್ಲ, ವೇದಿಕೆಯಲ್ಲೂ ಅವರು ಕಾಣಿಸಲೇ ಇಲ್ಲ, ಹುಡುಕಾಡಿದೆ – ಸುತ್ತಲು ಕಣ್ಣಾಯಿಸುತ್ತಲೇ ಇದ್ದೆ, ಸಮಾವೇಶ ಅವರಿಲ್ಲದೇ ಕಳೆಗುಂದಿದೆ ಎಂದುಕೊಂಡೆ,
ಎಂದಿನಂತೆ ಸಹಜ ಸ್ಥಿತಿಯಲ್ಲಿ ಎಲ್ಲಾ ಕಟ್ಟುಪಾಡುಗಳು ನಡೆಯುತ್ತಲೇ ಇತ್ತು, ಕುತೂಹಲ ಹೆಚ್ಚಾಯಿತು, ಸಾಕಷ್ಟು ಸಮಯದ ನಂತರ ಆಯೋಜಕರಿಗೆ ಕರೆದು ಆ ಜ್ಞಾನಿ ಸನ್ಯಾಸಿಯ ಕುರಿತಾಗಿ ಪ್ರಶ್ನಿಸಿ ಎಲ್ಲಿ ..? ಅವರ ಸುಳಿವಿಲ್ಲ, ಬಂದಿಲ್ಲವೇ ಎಂದೆ .. ಆಯೋಜಕರು ಇಲ್ಲ ಬಂದಿದ್ದಾರೆ ಆದರೆ ಅವರು ಇಲ್ಲಿಗೆ ಬರಲಾರರು ಎಂದರು..! ಯಾಕೆ ಎಂದಾಗ ಅವರೀಗ ಜ್ಞಾನ ಕಳೆದುಕೊಂಡ ಮಾನಸೀಕ ಅಸ್ವಸ್ಥರಾಗಿದ್ದಾರೆ ತಾನಾರು ಎನ್ನುವುದೇ ನೆನಪುಗಳಿಲ್ಲ, ಎಲ್ಲಾ ಮರೆತು ಹುಚ್ಚರಂತೆ ಬೀದಿ-ಬೀದಿಯಲ್ಲಿ ಓಡಾಡಿಕೊಂಡಿದ್ದಾರೆ ಎಂದು ಅದೋ.. ನೋಡಿ ಅಲ್ಲೇ ತಲೆಕೆರೆದುಕೊಂಡು ಅರೆ-ಬರೆ ಬಟ್ಟೆ ತೊಟ್ಟು ವರ್ಷದಿಂದ ಜಳಕವೂ ಮಾಡದೇ ಕೊಳಕಿನಂತಾಗಿದ್ದಾರೆ ಎಂದು ಬಹಳ ನೋವಿನಿಂದಲೇ ತೋರಿಸಿದಾಗ ಅನಿಸಿದ್ದು ಇಷ್ಟೆ..! ನಾವೆಷ್ಟೆ ಜ್ಞಾನಿಗಳಾಗಿದ್ದರೂ ಸರಿ, “ಮೇಲೊಬ್ಬ ಮಾಯಾವಿ” ತಲೆಯಲ್ಲಿ ಒಂದು ಸುತ್ತು ಸಡಿಲಗೊಳಿಸಿದನೆಂದರೆ ಈ ಪರಿಸ್ಥಿತಿ ಎದುರುಗೊಳ್ಳುತ್ತದೆ ಎಂದು ವಿವರಿಸುತ್ತಿದ್ದಾಗ ನಾನು ನಿಜಕ್ಕೂ ತಬ್ಬಿಬ್ಬಾದೆ.
ಜ್ಞಾನಿಗಳೆಂದೋ…! ಅಹಂಕಾರದಿ ಬೀಗಿಕೊಂಡರೆ ಇರುವ ಎಲ್ಲಾ ಅವಕಾಶಗಳನ್ನು ಕಳೆದುಕೊಂಡು ಮಾನಸೀಕ ಅಸ್ವಸ್ಥತೆಯ ಕೂಪಕ್ಕೆ ಬಲಿಯಾಗಬೇಕು ಇಲ್ಲವೆಂದರೆ ಖಿನ್ನತೆಗೆ ಒಳಗಾಗಿ ಪರಿತಪಿಸಬೇಕಾದೀತು ಎನ್ನುವ ಅಂತಿಮ ತೀರ್ಮಾನಕ್ಕೆ ಬರಲು ಪ್ರಯತ್ನಿಸಬೇಕಿದೆ ಎನ್ನುವುದು ಈ ಉದಾಹರಣೆ ಕಲಿಸಿಕೊಡುತ್ತದೆ ಅಲ್ಲವೇ ಸ್ನೇಹಿತರೇ..!?
ಇನ್ನೂ ಬದುಕಿನ ಮೊದಲ ಪುಟಗಳೇ ಅರಿತುಕೊಳ್ಳದೆ ಕೊನೆಯ ಪುಟದ, ಕೊನೆ ಸಾಲಿನಲ್ಲಿದ್ದೇನೆ ಎನ್ನುವ ಜ್ಞಾನ ನಮ್ಮದಾಗಿರಬಾರದು, ಅದೆಷ್ಟೇ ಕಲಿತರು ಸಂಯಮ- ಶಾಂತಿ, ಕೃತಿಗೊಳಿಸುವ ಕೈಂಕರ್ಯ ಇಲ್ಲವೆಂದರೆ ಕಲಿತಿದ್ದು ಏನು ಪ್ರಯೋಜನವಾದೀತು..? ಕಲಿಯುತ್ತಲೇ ಇರಬೇಕು ಕಲಿತಿದ್ದನ್ನು ಇನ್ನೋರ್ವರಿಗೆ ಧಾರೆಯೆರೆಯಬೇಕು ಅದಾಗಲೇ ಕಲಿತಿದ್ದು ಸಾರ್ಥಕವೆಂದಾಗುತ್ತದೆ.
ಇನ್ನೂ “ಅವಕಾಶ” ಇದು ಎಲ್ಲರ ಬದುಕಿನ ಜಗುಲಿಯ ವಿಳಾಸಕ್ಕೆ ಬರುವ ಪತ್ರ, ಇದನ್ನು ತೆಗೆದುಕೊಳ್ಳಬೇಕು, ಓದಬೇಕು, ಭಾವನಾತ್ಮಕವಾದ ಸಂಬಂಧಗಳನ್ನು ಬೆಸೆದು ಲೋಕದ ಜೀವಪರತೆಯ ದನಿಯಾಗಬೇಕು. ಹೀಗಿದ್ದಾಗ ವಿಳಾಸಕ್ಕೆ ಬಂದ ಅವಕಾಶದ ಪತ್ರ ಶಾಸನವಾಗುತ್ತದೆ, ಇಲ್ಲವೆಂದರೆ ಅದೊಂದು ಲದ್ದಿಯಾಗಿ ಬಿಡುತ್ತದೆ. ಇಂತಿವ ಸಂಗತಿಗಳನ್ನು ತಿಳಿಸುತ್ತಾ ನಾ ಹುಡುಕಲೊರಟಿರುವ ಆ ಜ್ಞಾನಿಗಳ ವಿಳಾಸವಿದ್ದರೆ ಕೊಡಿ ಅವರಿಗಿರುವ ಲೋಕಜ್ಞಾನದಿ ಮಿಂದು ಪುನೀತನಾಗುತ್ತೇನೆ, ಹೇ ವಿಪರೀತ ಜ್ಞಾನಿಗಳೇ ಕ್ಷಮಿಸಿ ದರ್ಶಿಸಿಬಿಡಿ ನಿಮ್ಮ ಪಾದಗಳನ್ನು ಸ್ಪರ್ಶಿಸಿ ಧನ್ಯನಾಗುತ್ತೇನೆ.


