I ಪುಸ್ತಕ ಓದು ಎಲ್ಲಾ ಮನೆಗಳ ಹವ್ಯಾಸವಾಗಲಿ I ಕಸಾಪ ಡಿ. ಮಂಜುನಾಥ I
ಶಿವಮೊಗ್ಗ : ನಮ್ಮ ಮನೆಗೆ ಪುಸ್ತಕ ಕೊಂಡುತಂದು ಓದಿದನಂತರ ಅಲ್ಲಿರುವ ವಿಚಾರಗಳನ್ನು ಮನೆ ಮಂದಿಯಲ್ಲ ಕುಳಿತು ಚರ್ಚೆಮಾಡುವಂತೆ ಆಗಬೇಕು. ಬಿಡುವು ಮಾಡಿಕೊಂಡು ಪಕ್ಕದಮನೆ ವಿಚಾರವೋ, ಇನ್ನಾರದ್ದೋ ವಿಚಾರಕ್ಕೆ ಒತ್ತುಕೊಟ್ಟು ಧ್ವೇಶ ಅಸೂಯೆ ತುಂಬಿಕೊಳ್ಳುವುದು ಬಿಟ್ಟು ಮನೆಗೊಂದು ಪುಸ್ತಕ ತನ್ನಿ, ನೀವು ಓದಿ ಮಕ್ಕಳು ಓದುವಂತೆ ವಾತಾವರಣ ಸೃಷ್ಠಿಮಾಡೋಣ. ಆ ಮೂಲಕ ಸೃಜನಶೀಲ ಮನಸ್ಸುಗಳ ಸೃಷ್ಟಿಗೆ ಪ್ರಯತ್ನ ಮಾಡೋಣ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ತಿಳಿಸಿದರು.
ಅವರು ತೀರ್ಥಹಳ್ಳಿ ತಾಲ್ಲೂಕಿನ ಬೆಜ್ಜುವಳ್ಳಿಯ ನಿವಾಸಿ ವಿಶ್ರಾಂತ ಪೋಲಿಸ್ ಅಧಿಕಾರಿಗಳು ಕವಿಗಳಾದ ಮಂಜುನಾಥ ಬಿ. ಬಿ. ಅವರ ಮನೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ನಮ್ಮ ಮಕ್ಕಳು ಮೊಬೈಲ್ ಹಿಡಿದು ಕಾಣೆಯಾಗುತ್ತಿದ್ದಾರೆ. ಅವರಿಗೆ ನಾವು ಸುಲಭವಾಗಿ ಮೊಬೈಲ್ ಸಿಗುವಂತೆ ಮಾಡುತ್ತಿದ್ದೇವೆ. ಪುಸ್ತಕ, ಪತ್ರಿಕೆ ಕಡೆ ಗಮನಹರಿಸುವ ಪ್ರಯತ್ನ ಮಾಡುತ್ತಿಲ್ಲ. ಮಕ್ಕಳು ಕೇಳಿದ್ದೆಲ್ಲಾ ಕೊಡಿಸಲು ಹಂಬಲಿಸುವ ಪೋಷಕರು ಮನೆಗೊಂದು ದಿನಪತ್ರಿಕೆ, ವಾರ ಪತ್ರಿಕೆ ತರಿಸುವಲ್ಲಿ ಆಸಕ್ತಿ ತೋರುತ್ತಿಲ್ಲ. ವರ್ತಮಾನದ ಅರಿವಾಗುತ್ತಿಲ್ಲ. ಭಾಷೆ ಓದಲು, ಬರೆಯಲು ಬಾರದ ಸ್ತಿತಿಗೆ ಬಂದಿರುವುದನ್ನು ಇನ್ನಾದರೂ ಗಂಭೀರವಾಗಿ ಚಿಂತಿಸಲು ಮನೆಗೊಂದು ಗ್ರಂಥಾಲಯ ಪ್ರೇರಣೆಯಾಗಲಿ ಎಂದು ಆಶಿಸಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾದ ರೇಣುಕಾ ಹೆಗಡೆ ಅವರು ಮಾತನಾಡಿ ಇದೊಂದು ಅತ್ಯುತ್ತಮ ಆಲೋಚನೆಯಾಗಿದೆ. ಸಣ್ಣಪುಟ್ಟ ಪುಸ್ತಕ ಓದುತ್ತಲೇ ಓದುವ ಹವ್ಯಾಸ ರೂಢಿಸಿಕೊಳ್ಳುವ ಪ್ರಯತ್ನ ಮಾಡಬೇಕೆಂದು ಆಶಿಸಿದರು. ಸಾಹಿತಿಗಳು, ವಿಶ್ರಾಂತ ಪ್ರಾಂಶುಪಾಲರಾದ ಡಾ. ಜಯಶೀಲ ಅವರು ಪುಸ್ತಕದ ಮಹತ್ವ ತಿಳಿಸುವಲ್ಲಿ ಮನೆ, ಶಾಲಾ, ಕಾಲೇಜು, ಸಮಾಜ ವಿಫಲವಾಗಿದ್ದನ್ನು ಎಲ್ಲರೂ ಒಪ್ಪಿಕೊಳ್ಳಬೇಕಿದೆ. ಕೆಲವರಿಗೆ ಮಾತ್ರ ಸೀಮಿತವಲ್ಲ ಎನ್ನುವ ಅರಿವು ಮೂಡಿಸಲು ಒಳ್ಳೆಯ ಪ್ರಯತ್ನ ಎಂದು ವಿವರಿಸಿದರು. ಪುಸ್ತಕ ಪ್ರಾಧಿಕಾರದ ಜಿಲ್ಲಾ ಸಂಚಾಲಕ ಸಮಿತಿಯ ಸದಸ್ಯರಾದ ಲೇಖಕಿ ಗಾಯತ್ರಿ ಶೇಷಗಿರಿ ಅವರು ತಾಲ್ಲೂಕಿನ ಎಲ್ಲೆಡೆ ಮನೆಗೊಂದು ಗ್ರಂಥಾಲಯ ಹೊಂದುವಂತೆ ಮಾಡಲು ಎಲ್ಲರ ನೆರವಿನೊಂದಿಗೆ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಮಂಜುನಾಥ ಬಿ. ಬಿ. ಅವರು ಅಧ್ಯಕ್ಷತೆ ವಹಿಸಿ ತಮ್ಮ ಮನೆಯಲ್ಲಿ ಗ್ರಂಥಾಲಯ ಆರಂಭ ಮಾಡುತ್ತಿರುವುದಕ್ಕೆ ಹರ್ಷವ್ಯಕ್ತಪಡಿಸಿದರು.
ಕಸಾಪ ತಾಲ್ಲೂಕು ಅಧ್ಯಕ್ಷರಾದ ಟಿ. ಕೆ. ರಮೇಶ್ ಶೆಟ್ಟಿ, ಕರ್ನಾಟಕ ಜಾನಪದ ಪರಿಷತ್ತು ತಾಲ್ಲೂಕು ಅಧ್ಯಕ್ಷರಾದ ಲೀಲಾವತಿ ಜಯಶೀಲ, ಕಸಾಪ ಹೋಬಳಿ ಸಮಿತಿ ಪದಾಧಿಕಾರಿಗಳಾದ ಶೈಲಾ ಕೃಷ್ಣಮೂರ್ತಿ, ಅಬ್ದುಲ್ ರೆಹಮಾನ್, ಸತೀಶ್, ಸಿ. ಎಂ. ನೃಪತುಂಗ, ಮುಖ್ಯ ಶಿಕ್ಷಕರಾದ ಅಶೋಕ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಜೀರುಂಡೆ ಕವನ ಸಂಕಲನ ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

