I ಪುಸ್ತಕ ಪ್ರೀತಿಯ ಬೀಜ ಬಾಲ್ಯದಲ್ಲೆ ಬಿತ್ತಬೇಕು I ಡಾ. ಮಾನಸ I
ಶಿವಮೊಗ್ಗ: ಪುಸ್ತಕ ಓದುವ ಸಂಸ್ಕೃತಿ ಬಾಲ್ಯದಿಂದಲೇ ಮಕ್ಕಳಲ್ಲಿ ಬೆಳೆಸಿದಾಗ ಮಾತ್ರ ಚಿಂತನಶೀಲ, ಸಂವೇದನಾಶೀಲ ಹಾಗೂ ವೈಚಾರಿಕ ಸಮಾಜ ನಿರ್ಮಾಣ ಸಾಧ್ಯ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಅಭಿಪ್ರಾಯಪಟ್ಟರು.
ಭದ್ರಾವತಿ ತಾಲ್ಲೂಕಿನ ಶಂಕರಘಟ್ಟದಲ್ಲಿರುವ ಸಂಶೋಧನಾ ವಿದ್ಯಾರ್ಥಿ ಆಶಿಕ್ ಹಾಗೂ ಕುವೆಂಪು ನಗರದ ಮಂಜುನಾಥ ಅವರ ನಿವಾಸದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತಿ ಸಮಿತಿ ವತಿಯಿಂದ ಭಾನುವಾರ ಆಯೋಜಿಸಿದ್ದ ‘ಮನೆಗೊಂದು ಗ್ರಂಥಾಲಯ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದಲ್ಲಿ ಅರಿವಿಗಿಂತ ಅಂಧನಂಬಿಕೆಗಳು ಹೆಚ್ಚಾಗುತ್ತಿರುವ ಇಂದಿನ ಸಂದರ್ಭದಲ್ಲಿ ಜ್ಞಾನದ ಬೆಳಕು ಹರಡುವ ಏಕೈಕ ಸಾಧನ ಪುಸ್ತಕಗಳಾಗಿವೆ. ಆದ್ದರಿಂದ ಪ್ರತಿಯೊಂದು ಮನೆಯಲ್ಲೂ ಒಂದು ಪುಟ್ಟ ಗ್ರಂಥಾಲಯ ರೂಪುಗೊಳ್ಳಬೇಕು ಎಂದು ಹೇಳಿದರು.
ಸಂಶೋಧನಾ ವಿದ್ಯಾರ್ಥಿ ಆಶಿಕ್ ಮಾತನಾಡಿ, ನನ್ನ ತಾಯಿ ಚಪ್ಪಲಿ ಹೊಲಿದು ವಿದ್ಯಾಭ್ಯಾಸಕ್ಕೆ ಬೆನ್ನೆಲುಬಾದರು. ಶಿಕ್ಷಣದ ಜೊತೆಗೆ ಸಾಹಿತ್ಯದ ಓದಿನ ಅಭಿರುಚಿಯನ್ನೂ ಬೆಳೆಸಿದರು. ಪುಸ್ತಕಗಳೇ ನನ್ನ ವ್ಯಕ್ತಿತ್ವವನ್ನು ರೂಪಿಸಿವೆ. ಓದಿನ ಮೂಲಕ ಮಾನವೀಯತೆ, ಸಂವೇದನಾಶೀಲತೆ ಮತ್ತು ಜೀವನ ಮೌಲ್ಯಗಳನ್ನು ಅರಿತುಕೊಂಡೆ. ಇಂದು ನನ್ನ ಬಳಿ ಸಾವಿರಾರು ಪುಸ್ತಕಗಳ ಸಂಗ್ರಹವಿದ್ದು, ಐದುನೂರಕ್ಕೂ ಹೆಚ್ಚು ಪುಸ್ತಕಗಳನ್ನು ಓದಿದ್ದೇನೆ. ಓದುವ ಆಸಕ್ತಿಯಿರುವ ಸ್ನೇಹಿತರಿಗೂ ಪುಸ್ತಕಗಳನ್ನು ನೀಡುತ್ತಾ ಓದುವ ಸಂಸ್ಕೃತಿಯನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತಿ ಸಮಿತಿ ಜಿಲ್ಲಾ ಸಂಚಾಲಕರಾದ ಡಿ. ಮಂಜುನಾಥ ಮಾತನಾಡಿ, ಪುಸ್ತಕ ಸಂಸ್ಕೃತಿ ಎಂದರೆ ಕೇವಲ ಪುಸ್ತಕಗಳನ್ನು ಸಂಗ್ರಹಿಸುವುದಲ್ಲ. ಅದು ಭಾಷೆಯನ್ನು ಪ್ರೀತಿಸುವ, ಓದುವ, ಬರೆಯುವ ಹಾಗೂ ಚಿಂತಿಸುವ ಸೃಜನಶೀಲ ಮನಸ್ಸುಗಳನ್ನು ರೂಪಿಸುವ ಸಾಂಸ್ಕೃತಿಕ ಚಳವಳಿಯಾಗಿದೆ. ಪ್ರತಿಯೊಬ್ಬರೂ ವರ್ಷಕ್ಕೆ ಕನಿಷ್ಠ ಕೆಲವು ಪುಸ್ತಕಗಳನ್ನಾದರೂ ಖರೀದಿಸಿ ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು. ಆಗ ಮಾತ್ರ ಕನ್ನಡದ ಓದುಗ ಸಮುದಾಯ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮಿತಿಯ ಸದಸ್ಯರಾದ ಡಿ. ಗಣೇಶ್, ಮೋಹನ್ ಕುಮಾರ್, ವಿಕಾಸ್ ಸೇರಿದಂತೆ ಹಲವು ಪುಸ್ತಕಾಸಕ್ತರು ಭಾಗವಹಿಸಿದ್ದರು. ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಅಕ್ಷತಾ ಹುಂಚದಕಟ್ಟೆ ವಂದಿಸಿದರು.

