ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಸಾಕ್ಷಿ ಹೇಳಿದ ಮಸಣದ ಹೆಣ I
ಸಹಾನುಭೂತಿ ಇಲ್ಲದ ನಿಯಮ..
ಮನುಷ್ಯತ್ವವೇ ದರ್ಶಿಸದ ಕ್ರೌರ್ಯ,
ಮಸಣದ ಹೆಣ ಕ್ರಮಿಸಿ, ಸಾಕ್ಷೀ ಹೇಳಿತು,
ಖಾತೆಯ ಹಣ ಎನ್ನದೆಂದು ತಿಳಿಸಿತು,
ಆದಿವಾಸಿ ಜೀತು ಮುಂಡಾನ ಅನಕ್ಷರಸ್ಥತೆ..!
ಸಾಕ್ಷರತೆಯ ಮೂಲಭೂತ ಜ್ಞಾನ ಕೆಣಕಿತ್ತು,
ಬ್ಯಾಂಕಿಂಗ್ ಮಾನಸೀಕತೆ ದರ್ಪಿಸಿ ದರ್ಪಣವಿಟ್ಟಿತ್ತು,
ದಿಕ್ಕು ತೋಚದಾತ, ಗೋರಿ ಬಗೆದು ಹೊತ್ತು ತಂದಿದ್ದ..!
ಮೂಳೆಮಾಂಸಗಳ ಜಾರಿದ್ದ ಹೊದಿಕೆಯದು,
ದಾರಿ ಉದ್ದಕ್ಕೂ ಅಮಾನವೀಯತೆ ಸಾರಿತ್ತು,
ಜಗದ ಜಗಲಿನಲಿ, ಕಿಯೋಂಜಾರ್ ಊರು ಹರಿದಾಡಿತು,
ಒಡಿಶಾದ ಎದೆಯಂಗಳದಿ ಬಿಸಿಗಂಬನಿ ತುಂಬಿತ್ತು,
ನಿರ್ಲಕ್ಷ್ಯ, ನಿರ್ಲಜ್ಜಗೇಡಿನ ಮಾತುಗಳು,
ಹೃದಯ ವಿದ್ರಾವಕ ಘಟನೆ ಘಟಿಸಿದ ಕ್ಷಣಗಳು,
ಮಾನವೀಯತೆಯೊಮ್ಮೆ ಮೈ ನಡುಗಿಸಿತು,
ಕೊನೆಗೂ ಸಾಕ್ಷಿಗೆ ತಲೆಬಾಗಿದ ಅಧಿಕಾರಿಗಳು,
ಭಯದ ಬೆವರಿನ ನೀರಿನೊಳು ತೊಯ್ದಿದ್ದರು..!

