I ಬಂಜಾರ ಯುವಕರ ಮೇಲಿನ ಕೇಸು ಹಿಂಡೆಯಿರಿ I ಆಯನೂರು ಶಿವಾನಾಯ್ಕ್ I
ಶಿವಮೊಗ್ಗ: ಸಂತ ಸೇವಾಲಾಲರ ಭಕ್ತರಾದ ಮಾಲಾಧಾರಿಗಳ ಮೇಲೆ ಹಾಕಿರುವ ಪ್ರಕರಣಗಳನ್ನು ರಾಜ್ಯ ಸರ್ಕಾರ ಕೂಡಲೇ ಹಿಂದೆ ಪಡೆಯಬೇಕೆಂದು ಶಿವಮೊಗ್ಗ ಜಿಲ್ಲಾ ಬಂಜಾರ ಸಂಘದ ಪ್ರಮುಖರಾದ ಆಯನೂರು ಶಿವಾನಾಯ್ಕ್ ಆಗ್ರಹಿಸಿದ್ದಾರೆ.
ರಾಜ್ಯ ಸರಕಾರ ಒಳಮೀಸಲು ನಿಗದಿ ಮಾಡುವಾಗ ಬಂಜಾರ ಸಮುದಾಯಕ್ಕೆ ಘೋರ ಅನ್ಯಾಯ ಮಾಡಿದೆ. ಶಿವರಾತ್ರಿಯಂದು ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಸರಕಾರದ ಪ್ರತಿನಿಧಿಯಾದ ಡಿ.ಕೆ.ಶಿವಕುಮಾರ್ ಗಮನ ಸೆಳೆಯಲು ಸಮಾಜದ ಯುವಕರು ಸರಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ಕಾಡುಮೇಡಲ್ಲಿ ವಾಸವಾಗಿರುವ ಸಾಮಾಜಿಕವಾಗಿ ಹಿಂದುಳಿದಿರುವ ಬಂಜಾರ ಸಮುದಾಯಕ್ಕೆ ಆದ ಅನ್ಯಾಯದಿಂದ ಯುವಜನರಲ್ಲಿ ಸಹಜವಾಗಿಯೇ ಆಕ್ರೋಶ ಇದೆ.
ಸರ್ಕಾರ ಗಮನಹರಿಸಿ ಮುಂದಿನ ದಿನಗಳಲ್ಲಿ ಅನ್ಯಾಯ ಸರಿ ಮಾಡಲಿ ಎಂಬ ಒತ್ತಾಸೆ ಅಂದಿನ ಪ್ರತಿಭಟನೆಯಲ್ಲಿತ್ತೇ ವಿನಾ ಯಾರನ್ನೂ ಅವಮಾನಿಸುವ ಉದ್ದೇಶವಿರಲಿಲ್ಲ. ಆದರೆ ನ್ಯಾಯ ಕೇಳುವುದೇ ತಪ್ಪು ಎಂಬ ಭಾವನೆ ಹೊಂದಿರುವ ರಾಜ್ಯ ಸರಕಾರ, ಬಂಜಾರ ಸಮುದಾಯದ ಯುವಕರ ವಿರುದ್ಧ ಕೇಸು ದಾಖಲಿಸಿರುವುದು ಸರಿಯಾದ ಕ್ರಮವಲ್ಲ. ಕೂಡಲೇ ಈ ಪ್ರಕರಣಗಳನ್ನು ಹಿಂದೆ ಪಡೆಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಬಂಜಾರ ಸಮುದಾಯ ರಾಜ್ಯ ವ್ಯಾಪಿ ಹೋರಾಟ ಮಾಡಲಿದೆ ಎಂದು ಜೆಡಿಎಸ್ ಮುಖಂಡರೂ ಆಗಿರುವ ಆಯನೂರು ಶಿವಾನಾಯ್ಕ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

