I ಎಸ್ಎಸ್ಎಲ್’ಸಿ ಫಲಿತಾಂಶ I ತೀರ್ಥಹಳ್ಳಿ ಅತ್ಯಂತ ಹೆಮ್ಮೆ ಪಡುವ ದಿನ I ಶಾಸಕ ಆರಗ ಜ್ಞಾನೇಂದ್ರ I
ತೀರ್ಥಹಳ್ಳಿ : ನಿನ್ನೆ ದಿನ ತೀರ್ಥಹಳ್ಳಿ ಅತ್ಯಂತ ಹೆಮ್ಮೆ ಪಡುವ ದಿನ ಎಂದು ಭಾವಿಸುತ್ತೇನೆ ನಮ್ಮ ಪ್ರೌಢಶಾಲೆಗಳು ಅತ್ಯಂತ ಹೆಮ್ಮೆ ಪಡುವ ವಿಷಯವಾಗಿದೆ. ತಾಲೂಕಿನ ಇತಿಹಾಸದಲ್ಲಿಯೇ ಇದು ಮೊದಲ ಬಾರಿಗೆ ಈ ರೀತಿಯ ರಿಸಲ್ಟ್ ಬಂದಿದೆ ಒಬ್ಬ ಶಾಸಕನಾಗಿ ತಾಲೂಕು ಆಡಳಿತದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ತಾಲೂಕು ಗ್ರಾಮೀಣಾಭಿವೃದ್ಧಿ ಭವನದ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಇದು ಸತತ ಪರಿಶ್ರಮದಿಂದ ಬಂದ ಫಲಿತಾಂಶವಾಗಿದೆ. ಪ್ರತಿಯೊಂದು ಶಾಲೆಯಲ್ಲೂ ಸಂಜೆ 7 ರಿಂದ ರಾತ್ರಿ 9 ವರೆಗೂ ತರಗತಿಗಳನ್ನು ಮಾಡಿದ್ದಾರೆ. ಪ್ರತಿಯೊಂದು ಶಾಲೆಯು ಕೂಡ ಸ್ಪರ್ಧೆ ರೀತಿಯಲ್ಲಿ ಮಕ್ಕಳನ್ನು ತಯಾರು ಮಾಡಿವೆ. ಒಟ್ಟು 42 ಪ್ರೌಢಶಾಲೆಗಳಿವೆ ಅವುಗಳಲ್ಲಿ ಒಟ್ಟು 27 ಸರ್ಕಾರಿ ಪ್ರೌಢ ಶಾಲೆಗಳಿವೆ. ಆ ಪೈಕಿ 24 ಶಾಲೆಗಳು 100% ರಿಸಲ್ಟ್ ಪಡೆದಿವೆ ಹೀಗೆ ಒಂದು ಹೊಸ ದಾಖಲೆಯನ್ನು ಸೃಷ್ಟಿ ಮಾಡಿವೆ ಎಂದರು.
ಯು ಆರ್ ಅನಂತಮೂರ್ತಿ ಪ್ರೌಢಶಾಲೆ ಪ್ರಾರಂಭವಾಗಿ 101 ವರ್ಷ ಆಗಿದೆ. ಪ್ರಥಮ ಬಾರಿಗೆ 100% ರಿಸಲ್ಟ್ ಬಂದಿದೆ. ನಮಗೆ ಶಿಕ್ಷಕರ ಕೊರತೆ ಇದೆ. ಅಲ್ಲಲ್ಲಿ ನಿಯೋಜನೆ ಆಧಾರದಲ್ಲಿ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಅನೇಕ ವಿಷಯಗಳಿಗೆ ಶಿಕ್ಷಕರೇ ಇಲ್ಲ. ಆದರೆ ಇರುವ ಶಿಕ್ಷಕರೇ ಈ ಕೊರತೆಯನ್ನು ನೀಗಿಸಿ ಉತ್ತಮ ಫಲಿತಾಂಶ ತಂದಿದ್ದಾರೆ. ಪಟ್ಟಣದ ವಾಗ್ದೇವಿ ಶಾಲೆಯ ಅನಘ ಎಂಬ ವಿದ್ಯಾರ್ಥಿನಿ ಜಿಲ್ಲೆಗೆ ಪ್ರಥಮ ರ್ಯಾಂಕ್ ಬಂದಿದ್ದಾರೆ. ಒಟ್ಟು 42 ಶಾಲೆಗಳಲ್ಲಿ ಕೇವಲ ಎರಡು ಶಾಲೆಗಳು ಬಿ ಗ್ರೇಡ್ ತೆಗೆದುಕೊಂಡಿವೆ. 44 ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ.. ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಮತ್ತು ಎಸ್ಡಿಎಂಸಿ ಅವರು ಉತ್ತಮ ಕೆಲಸ ಮಾಡಿದ್ದಾರೆ ಎಂದರು.
ಈಗಿನ ಬಿಇಒ ಗಿರಿರಾಜ್ ರವರು ಎಲ್ಲಾ ಶಿಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಕೆಲಸ ಮಾಡಿದ್ದಾರೆ. ನಮ್ಮ ತಾಲೂಕು ಪಂಚಾಯಿತಿ ಇ ಓ, ತಹಸೀಲ್ದಾರ್ ರವರಿಗೆ ಶಿಕ್ಷಣದ ಬಗ್ಗೆ ವಿಶೇಷ ಆಸಕ್ತಿ ಇದೆ. ಅವರು ಕೂಡ ಹಲವಾರು ಶಾಲೆಗಳಿಗೆ ಭೇಟಿ ನೀಡಿ ಚರ್ಚೆ ಮಾಡಿ ಮಾರ್ಗದರ್ಶನ ನೀಡಿದ್ದಾರೆ. ಒಬ್ಬ ಶಾಸಕನಾಗಿ ನನಗೆ ತುಂಬಾ ಸಂತೋಷವಾಗಿದೆ. ಸತತ ಎಂಟು ವರ್ಷಗಳಿಂದ ತೀರ್ಥಹಳ್ಳಿ ಜಿಲ್ಲೆಗೆ ಪ್ರಥಮ ಸ್ಥಾನಗಳಿಸುತ್ತಿದೆ.
ನಾನು ವಯಕ್ತಿಕವಾಗಿ ಬಹಳ ಜನ ಮುಖ್ಯ ಶಿಕ್ಷಕರಿಗೆ ಕರೆ ಮಾಡಿ ಅಭಿನಂದನೆಗಳನ್ನು ತಿಳಿಸಿದ್ದೇನೆ.. ಅವರೆಲ್ಲರೂ ಭಾವುಕರಾಗಿದ್ದರು.. ಕೇವಲ ಸೇತುವೆ ಕಟ್ಟಡ ರಸ್ತೆ ಅಲ್ಲ ಶಿಕ್ಷಣವು ಕೂಡ ಒಂದು ಅಭಿವೃದ್ಧಿಯ ಸಂಕೇತ ಶಿಕ್ಷಣದ ಮೂಲಕ ಒಂದು ಸಂಸ್ಕಾರವನ್ನು ಕಲಿಯುವುದು ಕೂಡ ಒಂದು ಅಭಿವೃದ್ಧಿಯ ಸಂಕೇತ ಎಂದು ಭಾವಿಸುತ್ತೇನೆ ಎಂದರು.
ಮೊನ್ನೆಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲೂ ಕೂಡ ನಾವು ಜಿಲ್ಲೆಗೆ ಟಾಪರ್ ಆಗಿದ್ದೇವೆ. ನಿಜವಾಗಲೂ ಸಂತೋಷವಾಗಿದೆ. ಸದ್ಯದರಲ್ಲೇ ಎಲ್ಲ ಮುಖ್ಯ ಶಿಕ್ಷಕರನ್ನು ಕರೆಸಿ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ನಡೆಸುತ್ತೇವೆ. ಪೋಷಕರು ಒಳ್ಳೆಯ ಫಲಿತಾಂಶಕ್ಕಾಗಿ ದಕ್ಷಿಣ ಕನ್ನಡ ಇತರೆ ಜಿಲ್ಲೆಗಳನ್ನು ಅವಲಂಬಿಸುತ್ತಿದ್ದರು. ಈಗ ತೀರ್ಥಹಳ್ಳಿ ಕಡೆ ನೋಡುತ್ತಿದ್ದಾರೆ ಎಂದರು..
ಈ ಸಂದರ್ಭದಲ್ಲಿ ತಹಸೀಲ್ದಾರ್ ರಂಜಿತ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಶೈಲಾ, ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿರಾಜ್, ಸಿಡಿಪಿಒ ಪ್ರವೀಣ್, ಶಿಕ್ಷಕರಾದ ಮಂಜಣ್ಣ ನಾಯಕ್, ಸ್ವಾಮಿ ಎನ್ ಜಿ, ವಿರೇಶ್, ದಿವಾಕರ್ ಸೇರಿ ಹಲವರು ಇದ್ದರು..

