ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಖಾಲಿ ಜೇಬು I
ಹೊತ್ತಾರೆ ಬರೆಗಳ ನೋವು,
ಕಡು ಕತ್ತಲ ನಿದುರೆಗಳ ಕಾವು,
ಕಂಗಳ ಹೊರಳಿಸುತಲಿ ಕೂತೇ,
ನಾಳೆಯ ಹೆಜ್ಜೆಗಳು ಕುದಿತಿತ್ತು,
ಯಾರ ಮೇಲೂ ಆರೋಪವಿತ್ತಿಲ್ಲ,
ಎದೆ ನಂಬಿಕೆಗಳೂ ಹುಸಿಯಾಗಿಲ್ಲ,
ಈ ಅರಿವಿನೊಳಗೆ ಬಲದಿ ಗುರುವಿದ್ದಾನೆ,
ಕುದಿವ ಹೆಜ್ಜೆಗಳ ಮುಂದಿಡಿಸುತ್ತಿದ್ದಾನೆ
ನೋವುಗಳ ತಣಿಸುತ್ತಿದ್ದಾನೆ,
ಇನ್ನಷ್ಟು ನಿಂದಿಸುವವರು ನಿಂದಿಸಲಿ
ಅಡ್ಡಿಯಾಗುವವರು ಅಡ್ಡಿಯಾಗಲಿ,
ಕುತ್ಸಿತ ವಿಕೃತಿಗಳು ಪಾನಮತ್ತದಿ ನರ್ತಿಸಲಿ,
ನಾನೆಂದಿಗೂ ಸೊಲ್ಲೆತ್ತುವುದಿಲ್ಲ,
ಮೌನದಿ ಗುರುವಿನ ದೀವಿಗೆ ಹಿಡಿಯುತ್ತೇನೆ,
ಕೋಟೆ ಕಟ್ಟಿ ಆಳಿದವರೇನು, ಅಳಿಯಲಿಲ್ಲವೇ,
ಅಧಿಕಾರದಂದಣದಿ ಮೆರೆದವರು ಬಸವಳಿದಿಲ್ಲವೇ,
ಕ್ಷುದ್ರಾವಸ್ಥೆಯೊಳು ಮುಗಿಬಿದ್ದವರು ಕೊನೆಯಾಗಲಿಲ್ಲವೇ..?!
ಇನ್ನೂ ಇವರು ಯಾವ ಲೆಕ್ಕದಿ ಇದ್ದಾರು..!?
ಹಸನ್ಮುಖಿಯಾಗಿಯೇ ಇದ್ದೇನೆ,
ನೋವುಗಳು ಸಹಿಸುವುದನು ಕಲಿಸಿದ್ದಾನೆ,
ಬೊಬ್ಬೆಗಳ ಹೆಜ್ಜೆಗಳು ಸಾಗುತ್ತಲೇ ಇದೆ,
ಕ್ರಮಿಸುವ ಕಾಲದಿ ಎಲ್ಲವೂ ನಿರುಮ್ಮಳವಾಗಿದೆ,
ನಾನೀಗ ಹೊಸತೊಂದು ದಿಕ್ಕಿನೆಡೆಗೆ,
ನಡೆದಿದ್ದೇನೆ, ನಡೆದಿದ್ದೇನೆ, ತುಸು ಕಾಲದಿ,
ಧ್ವೇಷಿಗಳು, ಅಸೂಯೇ ಚಿತ್ತಗಳು,
ಚಪ್ಪಾಳೆಗಳು ತಟ್ಟಲಿದೆ, ಗುಣಗಾನಿಸಲಿದೆ,
ಹೇ ಗುರುವೇ ಧನ್ಯವಾದಗಳು
ನೀ ಈ ಪಾಮರನೊಳಗೆ ಶಾಶ್ವತವಾಗಿದ್ದಕ್ಕೆ,
ಕ್ಲಿಷ್ಟಕರಗಳಲಿ ನಡೆಸುತ್ತಿರುವುದಕ್ಕೆ,
ಅಲೌಕಿಕತೆಯ ಕಟ್ಟಿ ಕೊಟ್ಟಿದ್ದಕ್ಕೆ
ಮತ್ತೊಮ್ಮೆ, ಮಗದೊಮ್ಮೆ ಧನ್ಯವಾದಗಳು.

