I ಉಚಿತ ಕಾನೂನು ನೆರವು ಯೋಜನಾ ಕಾರ್ಯಕ್ರಮ I ಉದ್ಘಾಟನೆ I
ಶಿವಮೊಗ್ಗ : ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ನವದೆಹಲಿ, ಇವರ ವತಿಯಿಂದ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿವಮೊಗ್ಗ ಹಾಗೂ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಇವರ ಸಹಯೋಗದೊಂದಿಗೆ ವೀರ್ ಪರಿವಾರ್ ಸಹಾಯತಾ ಯೋಜನಾ – ೨೦೨೫ ರ ಅಡಿಯಲ್ಲಿ ಕೇಂದ್ರ ರಕ್ಷಣಾ ಇಲಾಖೆಯ ಸಿಬ್ಬಂದಿಗಳು, ಮಾಜಿ ಸೈನಿಕರು ಮತ್ತು ಅವರ ಅವಲಂಬಿತರಿಗೆ ಉಚಿತ ಕಾನೂನು ನೆರವು ಯೋಜನೆಯನ್ನು ಉಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿಗಳು ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ ಅನು ಶಿವರಾಮನ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ, ತಮ್ಮ ಜೀವಿತಾವಧಿಯ ತಾರುಣ್ಯದ ದಿನಗಳನ್ನು, ಏನನ್ನಾದರೂ ಸಾಧಿಸುವ ದಿನಮಾನಗಳಲ್ಲಿ ನಮ್ಮ ರಾಷ್ಟ್ರರಕ್ಷಣೆಗಾಗಿ ತಮ್ಮ ತನುಮನಗಳನ್ನು ಮುಡಿಪಾಗಿಟ್ಟು ಮರಳಿ ಮನೆಗೆ ಬರುವ ನಿವೃತ್ತ ಸೇನಾಸಿಬ್ಬಂದಿಗಳಿಗೆ ಕಾನೂನು ಸಮಸ್ಯೆಗಳಿಂದ ಹೊರಬರಲು ಇದೊಂದು ಅತ್ಯುತ್ತಮ ವೇದಿಕೆಯಾಗಿದೆ. ಇದನ್ನು ಮಾಜಿ ಸೈನಿಕರು ಸದುಪಯೋಗಪಡಿಸಿಕೊಂಡು ಈ ಯೋಜನೆಯ ಆಶಯವನ್ನು ಸಾಕಾರಗೊಳಿಸುವಂತೆ ಕೋರಿದರು.
ಸಮಾರಂಭದಲ್ಲಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ನಿರ್ದೇಶಕರಾದ ಫ್ಲೈಟ್ ಲೆಫ್ಟಿನೆಂಟ್ ಎಮ್.ಎಸ್. ಲೋಲಾಕ್ಷ ಅವರು ಮಾತನಾಡಿ, ಸೇನೆಯಿಂದ ನಿವೃತ್ತರಾಗಿ ಬಂದ ನಂತರ ಮಾಜಿ ಸೈನಿಕರು ಎದುರಿಸುವ ಹಲವಾರು ಕಾನೂನಾತ್ಮಕ ಸಮಸ್ಯೆಗಳಿಗೆ ಈ ಯೋಜನೆಯಿಂದ ನೆರವು ದೊರೆಯುತ್ತದೆ. ಇದೊಂದು ಅಮೃತ ಘಳಿಗೆಯಾಗಿದ್ದು, ನಮ್ಮ ಮಾಜಿ ಸೈನಿಕ ಸಮುದಾಯ ಇಂಥ ಒಂದು ವಿಶಿಷ್ಟ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು, ತಮ್ಮ ಕಾನೂನು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ತಿಳಿಸಿದರು. ಶಿವಮೊಗ್ಗ ಜಿಲ್ಲಾ ಪ್ರಭಾರ ಪ್ರಧಾನ ಸತ್ರ ನ್ಯಾಯಾಧೀಶೆ ಮತ್ತು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಪ್ರೀತಿ ಕೆ.ಪಿ ಅವರು, ಹಿರಿಯ ದಿವಾಣಿ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿವಮೊಗ್ಗ ಇದರ ಸದಸ್ಯ ಕಾರ್ಯದರ್ಶಿ ಸಂತೋಷ್ ಎಂ.ಎಸ್. ಅವರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಶಿವಮೊಗ್ಗ ಕಛೇರಿಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರಾದ ಡಾ. ಸಿ.ಎ.ಹಿರೇಮಠ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಕಾನೂನು ನೆರವು ಮತ್ತು ಅರಿವುಗಳನ್ನು ಉಚಿತವಾಗಿ ನೀಡುವ ಯೋಜನೆ ಇದಾಗಿದ್ದು, ಶಿವಮೊಗ್ಗ-ಚಿತ್ರದುರ್ಗ-ದಾವಣಗೆರೆ ಜಿಲ್ಲೆಗಳ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು ಹಾಗೂ ಕೇಂದ್ರ ರಕ್ಷಣಾ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವವರು, ನಿವೃತ್ತರು ಈ ಯೋಜನೆಯ ಬಗ್ಗೆ ತಿಳಿದುಕೊಂಡು ತಮ್ಮ ಕಾನೂನಾತ್ಮಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ವಿನಂತಿಸಿದರು. ಸದ್ಯಕ್ಕೆ ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಕಛೇರಿಯಲ್ಲಿ ಪ್ರತ್ಯೇಕವಾಗಿ ವ್ಯವಸ್ಥೆ ಕಲ್ಪಿಸಿದ್ದು, ಈ ಕಾನೂನು ನೆರವು ಕೋಶವನ್ನು ವಾರದಲ್ಲಿ ಒಂದು ದಿನ ನಿವೃತ್ತ ಸೇನಾಧಿಕಾರಿ ಮತ್ತು ಕಾನೂನು ತಜ್ಞರಾದ ಶ್ರೀ ಡಾ. ಎಚ್.ಎಂ. ನಟರಾಜ ಅವರು ಉಚಿತವಾಗಿ ನಡೆಸಿಕೊಡುತ್ತಾರೆ. ಅಗತ್ಯತೆಗನುಸಾರ ಸೇವಾವಧಿ ಮತ್ತು ಕಛೇರಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ಈಗಾಗಲೇ ನ್ಯಾಯಾಲಯಗಳಲ್ಲಿ ಇರುವ ಪ್ರಕರಣಗಳು, ಹೊಸದಾಗಿ ದಾಖಲಿಸಬೇಕಾದ ಪ್ರಕರಣಗಳು, ನಿವೃತ್ತಿ ವೇತನ, ಭೂವ್ಯಾಜ್ಯ, ಕೌಟುಂಬಿಕ ವಿವಾದಗಳು, ಸ್ಥಿರ-ಚರ ಆಸ್ತಿ ವಿವಾದ, ಉತ್ತರಾಧಿಕಾರದ ಹಕ್ಕು-ಬಾಧ್ಯತೆಗಳ ಸಮಸ್ಯೆ ಇತ್ಯಾದಿಗಳ ಕುರಿತು ಈ ಕೋಶದಲ್ಲಿ ಯಾವುದೇ ಶುಲ್ಕವಿಲ್ಲದೇ ಕಾನೂನು ಸಹಾಯವನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: ೦೮೧೮೨ ೨೨೦೯೨೫ ಕಛೇರಿ ವೇಳೆಯಲ್ಲಿ ಹಾಗೂ ರಾಷ್ಟ್ರೀಯ ಸಹಾಯವಾಣಿ ೧೫೧೦೦ ನ್ನು ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು. ಈ ಸಮಾರಂಭದಲ್ಲಿ ಪಿ.ವಿ.ಕೃಷ್ಣಾರೆಡ್ಡಿ, ನಾರಾಯಣ ಮೂರ್ತಿ, ನೇಮೋಜಿರಾವ್, ಶ್ರೀನಾಥ, ಉಮೇಶ ಬಾಪಟ್, ಯತಿರಾಜ, ಮೋಹನ ಸಿ, ದಾದಾಪೀರ್, ಮಲ್ಲೇಶಪ್ಪ ಹಾಗೂ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಸಿಬ್ಬಂದಿಗಳೊಂದಿಗೆ ಹಲವಾರು ಮಾಜಿ ಸೈನಿಕರ ಸಂಘದ ಸದಸ್ಯರು ಮತ್ತು ಪದಾಧಿಕಾರಿಗಳು ಹಾಜರಿದ್ದರು.


