I ಪರಿಸರ ನಾಶ ತಡೆಯಲು ಇಂಧನ ಸಂರಕ್ಷಣೆ ಅಗತ್ಯ I ಬಿ.ಗೋಪಿನಾಥ್ I
ಶಿವಮೊಗ್ಗ: ಇಂಧನ ಉಳಿತಾಯ ಅಭ್ಯಾಸಗಳನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.
ರಾಯಲ್ ಆರ್ಕಿಡ್ನಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಮತ್ತು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹಭಾಗಿತ್ವದಲ್ಲಿ ಏರ್ಪಡಿಸಿದ್ದ ಮಾಹಿತಿ ಕಾರ್ಯಗಾರದಲ್ಲಿ ಮಾತನಾಡಿ, ಜನರು ಸಾಧ್ಯವಾದ ಸಂದರ್ಭಗಳಲ್ಲಿ ಸಾರ್ವಜನಿಕ ಸಾರಿಗೆಯನ್ನು ಬಳಸಬೇಕು. ಹೆಚ್ಚಿನ ಇಂಧನ ಉಳಿತಾಯ ಅಭ್ಯಾಸಗಳನ್ನು ಹೊಂದುವ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಕ್ರೇಡೆಲ್ ಹೊಂದಿದ್ದು, ವಿವಿಧ ಚಟುವಟಿಕೆಗಳನ್ನು ಕ್ರೇಡಲ್ ಆಯೋಜಿಸುತ್ತಿದೆ ಎಂದು ತಿಳಿಸಿದರು.
ಇಂಧನ ವ್ಯರ್ಥವನ್ನು ಕಡಿಮೆ ಮಾಡುವುದು, ದಕ್ಷ ಇಂಧನ ಬಳಕೆಯನ್ನು ಉತ್ತೇಜಿಸುವುದು ಮತ್ತು ಸುಸ್ಥಿರ ಅಭ್ಯಾಸಗಳನ್ನು ಪ್ರೋತ್ಸಾಹಿಸುವ ಕೇಂದ್ರ ವಿದ್ಯುತ್ ಸಚಿವಾಲಯದ ಅಧೀನದಲ್ಲಿರುವ ಇಂಧನ ದಕ್ಷತೆಯ ಬ್ಯೂರೋ 5 ಸ್ಟಾರ್ ರೇಟಿಂಗ್ ಹೊಂದಿರುವ ಇಂಧನ ಸಮರ್ಥ ಉಪಕರಣಗಳನ್ನು ಆಯ್ಕೆ ಮಾಡಬೇಕು. ಸ್ಟಾರ್ ರೇಟೆಡ್ ಗೃಹೋಪಯೋಗಿ ಉಪಕರಣಗಳನ್ನು ಉಪಯೋಗಿಸುವುದರ ಮೂಲಕ ಹವಮಾನ ಬದಲಾವಣೆ ಮತ್ತು ಇಂಗಾಲ ಅನಿಲ ಹೊರಸುಸುವಿಕೆ ತಡೆಯಬಹುದು ಎಂದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆರ್.ಗಣೇಶ್ ಮಾತನಾಡಿ, ಇಂಧನ ಸಂರಕ್ಷಣೆ, ಹವಾಮಾನ ಬದಲಾವಣೆ ಮತ್ತು ಪರಿಸರ ನಾಶವನ್ನು ಎದುರಿಸುವ ಭಾರತದ ವಿಶಾಲ ಧ್ಯೇಯದ ಭಾಗವಾಗಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವು ಕಾರ್ಯಕ್ರಮ ರೂಪಿಸಿದೆ ಎಂದು ಹೇಳಿದರು.
ರಾಜ್ಯದಲ್ಲಿನ ಚಟುವಟಿಕೆಗಳು ಇಂಧನ ವ್ಯರ್ಥವನ್ನು ಕಡಿಮೆ ಮಾಡುವುದು, ದಕ್ಷ ಇಂಧನ ಬಳಕೆ ಉತ್ತೇಜಿಸುವುದು ಮತ್ತು ಸುಸ್ಥಿರ ಅಭ್ಯಾಸಗಳನ್ನು ಪ್ರೋತ್ಸಾಹಿಸುವ ಬಗ್ಗೆ ಜಾಗೃತಿ ಮೂಡಿಸುವ ಗುರಿ ಹೊಂದಿವೆ ಎಂದು ತಿಳಿಸಿದರು.
ಜೆಎನ್ಎನ್ ಇಂಜಿನಿಯರಿಂಗ್ ಕಾಲೇಜಿನ ಡಾ. ಎಚ್.ಬಿ.ಸುರೇಶ್, ಕ್ರೆಡಲ್ ಅಧಿಕಾರಿಗಳಾದ ಪ್ರೀತಿ ಗುಪ್ತ, ನಿತಿನ್ ಅವರು ಇಂಧನ ಸಂರಕ್ಷಣೆ ಪಾಲಿಸುವ ಬಗ್ಗೆ ರೂಪರೇಷೆ ವಿವರಿಸಿದರು. ಉಪನ್ಯಾಸದ ನಂತರ ಕಾರ್ಯಗಾರದಲ್ಲಿ ಹಾಜರಿದ್ದ ಶಿಬಿರಾರ್ಥಿಗಳಿಗೆ ಎಲ್ಲ ಸಂದೇಹದ ಪ್ರಶ್ನೆಗಳಿಗೆ ಸಮರ್ಪಕ ಮಾಹಿತಿ ನೀಡಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ, ನಿರ್ದೇಶಕರಾದ ಗಣೇಶ್ ಎಂ ಅಂಗಡಿ, ವಿನೋದ್ ಕುಮಾರ್ ಜೈನ್, ವಸಂತ್ ಹೋಬಳಿದಾರ್ , ಬಿ.ಸುರೇಶ್ ಕುಮಾರ್, ಉದ್ಯಮಿ ಶಿಲ್ಪಾ ಗೋಪಿನಾಥ್ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹೋಮ್ ಅಪ್ಲೈಯನ್ಸ್ ಡೀಲರ್ಸ್, ಟೆಕ್ನಿಷಿಯನ್ಸ್, ಬಳಕೆದಾರರು ಹಾಗೂ ಅನೇಕ ವಾಣಿಜ್ಯ ಮತ್ತು ಕೈಗಾರಿಕ ಉದ್ಯಮಿಗಳು ಭಾಗವಹಿಸಿದ್ದರು.

