I ಚಿಟ್ ಫಂಡ್ ಕ್ಷೇತ್ರದಿಂದ ರಾಜ್ಯಕ್ಕೆ ಹೆಚ್ಚಿನ ಆದಾಯ I ಟಿ.ಎಚ್.ಎಂ.ಕುಮಾರ್ I
ಶಿವಮೊಗ್ಗ: ಚಿಟ್ ಫಂಡ್ಗಳಿಂದ ರಾಜ್ಯಕ್ಕೆ ಹೆಚ್ಚಿನ ಆದಾಯ ಬರುವ ಜತೆಯಲ್ಲಿ ಜನತೆಗೆ ಅನುಕೂಲವಾಗುತ್ತಿದೆ. ರಾಜ್ಯದಲ್ಲಿ 45 ವರ್ಷಗಳಿಂದ ನಡೆಯುತ್ತಿರುವ ನೋಂದಾಯಿತ ಚಿಟ್ ಫಂಡ್ ಸಂಸ್ಥೆಗಳ ಬೆಳವಣಿಗೆಗೆ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಸಹಕಾರ ಇಲಾಖೆಯ ರಿಜಿಸ್ಟರ್ ಟಿ.ಎಚ್.ಎಂ.ಕುಮಾರ್ ಹೇಳಿದರು.
ಬೆಂಗಳೂರಿನಲ್ಲಿ ಬಾಬು ಜಗಜೀವನ್ ರಾಮ್ ಭವನದಲ್ಲಿ ಕರ್ನಾಟಕ ರಾಜ್ಯ ಚಿಟ್ ಸ್ಟರ್ಸ್ ಅಸೋಸಿಯೇಷನ್ ಆಯೋಜಿಸಿದ್ದ ಅಖಿಲ ಭಾರತ ಸಮಾವೇಶದಲ್ಲಿ ಮಾತನಾಡಿ, ರಾಜ್ಯದಲ್ಲಿ ನಾಲ್ಕುವರೆ ಲಕ್ಷ ಸಹಕಾರ ಸಂಘಗಳು ನೋಂದಣಿಯಾಗಿವೆ. ಅದರಲ್ಲಿ ಚಿಟ್ ಫಂಡ್ ಸಂಸ್ಥೆಗಳಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಆದಾಯ ಬರುತ್ತಿದೆ ಹಾಗೂ ಸಾಮಾನ್ಯ ಜನತೆಗೆ ಅನುಕೂಲವಾಗಿದೆ ಎಂದು ತಿಳಿಸಿದರು.
ಅಸೋಸಿಯೇಷನ್ ಅಧ್ಯಕ್ಷ ಟಿ.ಸಿ.ವಿಜಯಕುಮಾರ್ ಮಾತನಾಡಿ, ಚಿಟ್ ಫಂಡ್ ಸಂಸ್ಥೆಯನ್ನು ಫೆಡರೇಷನ್ ಮಾಡಲು ಸಿದ್ಧತೆ ನಡೆಸಿದ್ದೇವೆ. ಸರ್ಕಾರ ರಾಜ್ಯ ಚಿಟ್ ಸ್ಟರ್ಸ್ ಅಸೋಸಿಯೇಷನ್ ಅನ್ನು ಫೆಡರೇಷನ್ ಆಫ್ ಕರ್ನಾಟಕ ಚಿಟ್ಸ್ ಎನ್ನುವ ಮಾನ್ಯತೆ ನೀಡಿದರೆ ಸರ್ಕಾರಕ್ಕೆ ಹೆಚ್ಚಿನ ಆದಾಯ ಹಾಗೂ ಗ್ರಾಹಕರಿಗೆ ಹೆಚ್ಚಿನ ಭರವಸೆ ದೊರೆಯುತ್ತದೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಂಡು ಸಹಕರಿಸಬೇಕು ಎಂದು ವಿನಂತಿಸಿದರು.
ಸಮಾವೇಶದಲ್ಲಿ ಶಿವಮೊಗ್ಗದಿಂದ ಸಹ್ಯಾದ್ರಿ ಚಿಟ್ಸ್ನ ಚೇರ್ಮನ್ ಟಿ.ಎಸ್.ಬದ್ರಿನಾಥ್, ಮ್ಯಾನೇಜಿಂಗ್ ಡೈರೆಕ್ಟರ್ ರಮೇಶ್ ಭಟ್, ಮಾರ್ಕೆಟಿಂಗ್ ಡೈರೆಕ್ಟರ್ ಶಿವರಾಜ್ ಉಡುಗಣಿ, ನಿರ್ದೇಶಕರಾದ ಜಿ.ವಿಜಯಕುಮಾರ್ ಹಾಗೂ ಯು.ರವೀಂದ್ರನಾಥ್ ಐತಾಳ್ ಹಾಜರಿದ್ದರು.
ಸಮಾವೇಶದಲ್ಲಿ ಮಾರ್ಗದರ್ಶಿ ಚಿಟ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಶೈಲಜಾ ಕಿರಣ್, ಎಂಎಸ್ಐಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್, ಸಹಕಾರ ಇಲಾಖೆ ಜಂಟಿ ನಿರ್ದೇಶಕ ಡಾ. ಸುರೇಶ್ ಗೌಡ, ಎಫ್ಕೆಸಿಸಿಐ ಅಧ್ಯಕ್ಷ ಎಂ.ಜಿ.ಬಾಲಕೃಷ್ಣ, ಕೆಸಿಎ ಆಡಳಿತ ಮಂಡಳಿಯ ಮನೋಹರ ಮಲ್ಲರಾಚಪ್ಪ, ಎಂ.ಹರೀಶ್ ಇತರರಿದ್ದರು.

