I ದುಶ್ಚಟಗಳಿಂದ ವಿದ್ಯಾರ್ಥಿಗಳು ದೂರವಿರಿ I ಮಂಜುನಾಥ್ I
ಶಿವಮೊಗ್ಗ: ನಶೆ ಮುಕ್ತ ಭಾರತ ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ್ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ ವತಿಯಿಂದ ಪೆಸಿಟ್ ಕಾಲೇಜಿನ ಸಭಾಂಗಣದಲ್ಲಿ ನಶೆ ಮುಕ್ತ ಭಾರತ ವಿಷಯ ಕುರಿತು ಮಾತನಾಡಿ, ಮಾದಕ ದ್ರವ್ಯಗಳ ದುಶ್ಚಟಗಳ ಬಗ್ಗೆ, ಅದರಿಂದ ಕುಟುಂಬದಲ್ಲಿ ಹಾಗೂ ಸಮಾಜದಲ್ಲಿ ಆಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದು ತಿಳಿಸಿದರು.
ದುಶ್ಚಟಗಳಿಂದ ಮಕ್ಕಳ ಆರೋಗ್ಯದಲ್ಲಿ ಹಾಗೂ ಕುಟುಂಬದಲ್ಲಿ ಮಕ್ಕಳ ವೈಯಕ್ತಿಕ ಬೆಳವಣಿಗೆಯಲ್ಲಿ ಉಂಟಾಗುವ ಕುಂಠಿತಗಳ ಬಗ್ಗೆ ವಿವರಿಸಿದರು. ಸಮಾಜಕ್ಕೂ ಹಾಗೂ ಕುಟುಂಬದವರಿಗೂ ಭದ್ರ ಬುನಾದಿ ಆಗಬೇಕಾಗಿದ್ದ ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗಿ ಜವಾಬ್ದಾರಿ ಹಾಗೂ ಕರ್ತವ್ಯವನ್ನು ಮರೆತು ಮಾದಕ ವ್ಯಸನಿಗಳಾಗಿದ್ದಾರೆ. ಇದರಿಂದ ಹೊರಬಂದು ಕುಟುಂಬಕ್ಕೆ ಹಾಗೂ ಸಮಾಜಕ್ಕೆ ದೊಡ್ಡ ಆಸ್ತಿಯಾಗಿ ಬೆಳೆಯಬೇಕು ಹಾಗೂ ಭವ್ಯ ಭಾರತದ ಭವಿಷ್ಯದ ಬೆನ್ನೆಲುಬಾಗಿ ವಿದ್ಯಾರ್ಥಿಗಳು ನಿಲ್ಲಬೇಕು ಎಂದರು.
ರೋಟರಿ ಶಿವಮೊಗ್ಗ ರಿವರ್ ಸೈಡ್ ಅಧ್ಯಕ್ಷ ಕೆ.ಎಸ್.ವಿಶ್ವನಾಥ ನಾಯಕ ಮಾತನಾಡಿ, ತಂದೆ ತಾಯಿ ಹಾಗೂ ಗುರಿ ಹಿರಿಯರು ದೇಶದ ಯುವಜನತೆಯಿಂದ ಹಲವಾರು ಉನ್ನತ ಮಟ್ಟದ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಸಹಜ. ಆ ನಿರೀಕ್ಷೆಗೆ ತಕ್ಕಂತೆ ಜೀವನ ನಡೆಸುವುದು ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿರುತ್ತದೆ ಎಂದು ತಿಳಿಸಿದರು.
ರೋಟರಿ ಕ್ಲಬ್ ಅಸಿಸ್ಟೆಂಟ್ ಗವರ್ನರ್ ಕೆ.ಪಿ. ಶೆಟ್ಟಿ, ವಲಯ ಸೇನಾನಿ ಎಸ್.ಪಿ.ಶಂಕರ್, ಮಾಜಿ ಅಧ್ಯಕ್ಷ ಆರ್.ದೇವೇಂದ್ರಪ್ಪ, ದ್ವಾರಕನಾಥ್, ಸತೀಶ್ ಗಾಂಧಿಬಸಪ್ಪ ಹಾಗೂ ಕಾಲೇಜಿನ ಪ್ರಾಚಾರ್ಯರು, ಸಿಬ್ಬಂದಿ ಇದ್ದರು.

