ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಜಾತಿ-ಧರ್ಮಗಳ ಜಗದೊಳು I
ಕಲ್ಲೂರ, ಬೊಮ್ಮನ,
ಮಾದರ, ಸಾಬರ
ಕಿಲಿಸ್ತಾನ್ರು, ಹಜಾಮ್ರು
ಶೆಟ್ಟರ, ಸುಡುಗಾಡು ಸಿದ್ದರ
ಜೀವ ವಿಂಗಡಣೆಯ ನೆಲೆಯಿದು,
ಜಾತಿ,ಧರ್ಮ ನಿಂದನೆಗಳ
ದನಿಯಿದು,
ಜಾತಿ ಹಿಡಿದರು, ಧರ್ಮ ಬಿಟ್ಟರು,
ಧರ್ಮ ಹಿಡಿದರು, ಜಾತಿ ಬಿಟ್ಟರು,
ಮಿಥ್ಯದ ಕೂಗು ಕೂಗಿಗೂ,
ಸೂರುಗಳ ಕಾವಿಟ್ಟರು,
ಬೆತ್ತಲ ಕಾಯಕೆ ಸೊಪ್ಪು-ಸೆದೆಗಳ ಸುತ್ತಿ,
ಹಸಿವ ದಾಹದಿ ಗೆಡ್ಡೆ -ಗೆಣಸು,
ಹಸಿ ಮಾಂಸಗಳ ಭಕ್ಷಿಸಿ,
ಪೊದೆ ಹಸಿರ, ಪ್ರತಿಧ್ವನಿಗಳ
ಆರಾಧಿಸಿ ಸಾಗಿತು,
ಮನುಕುಲವ ವೃದ್ದಿಸಿತು ಅನಾದಿ,
ಕೊಳೆಸಿತು ನಾಗರೀಕತೆಯ ಬುನಾದಿ,
ಮನಸು-ಮನಸುಗಳ
ಅಂತರದಿ, ಕಿಡಿಯ ಹಚ್ಚಿ
ದೈವ-ದೆವ್ವಗಳ ಸೃಷ್ಟಿಸಿ,
ಭಾವ ಬೇಗೆಗೆ ಹುಂಡಿಯಿಟ್ಟು,
ಬೆವರ ಕಿಸೆಗಳಿಗೆ ಕಂದಕವಿಟ್ಟರು,
ಕಂದಾಚಾರದಂದಣದಿ
ಮೊನಚು ಕಂದಲಿಗಳನು
ಶಿರಚ್ಛೇದನಕೆ ಅಣಿಗೊಳಿಸಿ,
ರುಧಿರದನಿಗಳ ತೊಟ್ಟಿಕ್ಕಿಸಿ,
ಬೊಗಸೆ ಬದುಕುಗಳ
ಸಮಾದಿಗೆ ದೌಡಾದರು,
ಅನಾದಿಯ ಕಾಲಗಳು ಕಾಲವಾಯಿತು,
ಮನಸಿನ ಮೃಗಿತನಗಳ ಮೇಳವಾಯಿತು,
ಅಂತರ್ಮುಖಿ ಆತ್ಮರತಿಗಳ ಕತ್ತಲಿಲಿ,
ದೀವಿಗೆಗಳು ಹಾರಿ ಹೋಯಿತು,
ಮಿಂಚು ಹುಳುವಿನಂತೆ ದನಿ ಮೊರೆದು
ಸದ್ದಿಲ್ಲದ ತೆರೆಗೆ ಸರಿಯಿತು,
ಲೋಕ ನಿಂದಿತರ ಜಗದೊಳು
ಜಾತಿ-ಧರ್ಮಗಳ ನೆಲೆಯೊಳು,
ಸತ್ಯವೇ ಹುದುಗಿ ಹೋಯಿತು,

