I ಮಹಾತ್ಮ ಗಾಂಧೀಜಿ ವ್ಯಕ್ತಿತ್ವ ಅರಿತುಕೊಳ್ಳುವುದು ಅವಶ್ಯ I ಡಾ. ಜಿ.ಆರ್.ಅಜ್ಜಯ್ಯ I
ಶಿವಮೊಗ್ಗ: ಮಹಾತ್ಮ ಗಾಂಧೀಜಿ ಅವರು ಇಂದಿನ ವರ್ತಮಾನದ ತುರ್ತು ಅಗತ್ಯವಾಗಿದ್ದಾರೆ ಎಂದು ಶಿವಮೊಗ್ಗ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಜಿ.ಆರ್.ಅಜ್ಜಯ್ಯ ಹೇಳಿದರು.
ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಎನ್ಎಸ್ಎಸ್ ಘಟಕ, ಇಕ್ಯೂಎಸಿ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಗಾಂಧಿವಾದದ ವಿಭಿನ್ನ ಆಯಾಮಗಳು ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿ, ಗಾಂಧೀಜಿ ಅವರನ್ನು ಅರಿಯುತ್ತ ಹೋದಂತೆ ಉತ್ತಮ ವ್ಯಕ್ತಿಯಾಗಿ ಮನುಷ್ಯ ರೂಪುಗೊಳ್ಳುತ್ತಾನೆ ಎಂದು ತಿಳಿಸಿದರು.
ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ. ವೂಡೆ ಪಿ.ಕೃಷ್ಣ ಅವರುಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ವಿದ್ಯಾರ್ಥಿಗಳೊಂದಿಗೆ ಗಾಂಧಿ ಕುರಿತು ಮುಕ್ತ ಸಂವಾದ ನಡೆಸಿದರು. ಗಾಂಧೀಜಿ ಅವರು ಭಾರತದ ಅದ್ಭುತ ದೃಷ್ಟಿಕೋನವೊಂದನ್ನು ನೀಡಿದ್ದು, ವಿದ್ಯಾರ್ಥಿಗಳ ಭವಿಷ್ಯದ ಕನ್ನಡಿ ಆಗಿದ್ದಾರೆ ಎಂದು ಹೇಳಿದರು.
ಕುವೆಂಪು ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಡಾ. ಶುಭಾ ಮರವಂತೆ ಮಾತನಾಡಿ, ಗಾಂಧೀಜಿ ಅವರು ತಮ್ಮ ಜೀವನದಲ್ಲಿ ಘಟನೆಗಳನ್ನು ನೆನೆದುಕೊಳ್ಳುತ್ತ ಸತ್ಯದರ್ಶನವನ್ನು ಮಾಡಿಸಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದಾವಣಗೆರೆ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪುರಸ್ಕೃತರಾದ ಮುರುಗೇಂದ್ರಪ್ಪ ಅವರನ್ನು ಸನ್ಮಾನಿಸಲಾಯಿತು. ಮೊದಲ ಗೋಷ್ಠಿಯಲ್ಲಿ ‘ನನ್ನ ಸತ್ಯಾನ್ವೇಷಣೆ ಆತ್ಮಕತೆ ಪ್ರಸ್ತುತತೆ’ ವಿಷಯದ ಕುರಿತು ಡಾ. ಎಚ್.ಟಿ.ಕೃಷ್ಣಮೂರ್ತಿ ಅವರು ಮಾತನಾಡಿದರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ದೇಶೀಯ ವಿದ್ಯಾಶಾಲಾ ಸಮಿತಿ ಅಧ್ಯಕ್ಷ ಕೆ.ಬಸಪ್ಪಗೌಡ, ಕಾರ್ಯದರ್ಶಿ ಎಸ್.ಪಿ.ದಿನೇಶ್, ಉಪಾಧ್ಯಕ್ಷ ಜಿ.ಮಧುಸೂದನ್, ಸಹಕಾರ್ಯದರ್ಶಿ ಡಾ. ಸತೀಶ್ ಕುಮಾರ್ ಶೆಟ್ಟಿ, ಕೋಶಾಧ್ಯಕ್ಷ ಎನ್. ಆರ್. ನಿತಿನ್, ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್, ಐಕ್ಯೂಎಸಿ ಸಂಯೋಜಕ ಎನ್.ಕುಮಾರಸ್ವಾಮಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ್, ಡಾ. ಡಿ. ಬಿ.ಶಿವರುದ್ರಪ್ಪ, ಡಾ. ಉಮೇಶ್ ಅಂಗಡಿ, ಡಾ. ರಾಜೇಶ್ವರಿ, ವನಜಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.

