“ಇದು ಕಳೆದು ಹೋಗುವವರ ಸುಂದರ ಕನವರಿಕೆಯ ಕವಿತೆ. ಕುಂತಲ್ಲೆ ನಿಂತಲ್ಲೆ ಮಾಯವಾಗುವ ಜೀವದ ಸಂವೇದನೆಗಳ ಮಧುರ ಭಾವಗೀತೆ. ಆದರೆ ಎದೆಯ ಅನುರಣಿಸುವ ಅನುರಾಗದ ಹಕ್ಕಿಯ ರಿಂಗಣಗಳ ಸ್ವರಗೀತೆಯಿದು. ಒಲವರಾಗಕೆ ಲಯ ತಪ್ಪುವ ಹೃದಯಮೃಂದಗದ ತಾಳಗಳ ತಲ್ಲಣಗಳ ಚಿರಗೀತೆಯಿದು.? ಪ್ರೆಮಗಾರುಡಿಗೆ ಪರವಶವಾಗುವ ಜೀವ-ಭಾವಗಳ ಯುಗಯುಗದ ಜಗದ ನಿತ್ಯಸತ್ಯ ಅಮರಗೀತೆಯಿದು. ಏನಂತೀರಾ ..?” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ಅನುರಣನ.!
ಗೆಳೆಯ ಬಾಯಿಬಿಗಿದು
ಮಾತುಗಳ ತಡೆದು
ಮೂಕವಾಗಬಲ್ಲೆ.!
ಬೋರ್ಗರೆವ ಭಾವವ
ತಡೆಯಲು ಒಡಲಿಗೆ
ತುಟಿಗಳಿಲ್ಲವಲ್ಲೋ.!
ಕಂಬನಿ ತಡೆಹಿಡಿದು
ಕಂಗಳ ಗಟ್ಟಿಮುಚ್ಚಿ
ಮಲಗಲೂಬಲ್ಲೆ.!
ಕಾಡುವ ಕನಸುಗಳ
ಮುಚ್ಚಲು ಒಳಗಣ್ಣಿಗೆ
ರೆಪ್ಪೆಗಳಿಲ್ಲವಲ್ಲೋ.!
ನಿನ್ನ ಸಂಧಿಸದಂತೆ
ತನುವ ಬಂಧಿಸಿ
ನಿಲ್ಲಿಸಲೂಬಲ್ಲೆ.!
ಸ್ಮರಿಸಿ ಸ್ಪಂದಿಸದಂತೆ
ಹಿಡಿಯಲು ಎದೆಗೆ
ಬಾಹುಗಳಿಲ್ಲವಲ್ಲೋ.!
ಮನೆಬಾಗಿಲು ಮುಚ್ಚಿ
ಬರಡು ಬಂಡೆಯಾಗಿ
ಒಂಟಿ ಕೂರಬಲ್ಲೆ.!
ನಿನ್ನತ್ತ ಹೋಗದಂತೆ
ಮನಕೆ ಬೀಗಜಡಿಯಲು
ಚಿತ್ತಕ್ಕೆ ಚಿಲುಕವಿಲ್ಲವಲ್ಲೋ.!
ಉಸುರುಸಿರಲು ನಿನ್ನಯ
ಹೆಸರ ಬರೆವ ಹೃದಯಕೆ
ಕಡಿವಾಣವಿಲ್ಲವಲ್ಲೋ.!
ಕ್ಷಣಕ್ಷಣವೂ ನಿನ್ನರಸುತ
ಕಳೆದು ಹೋಗುವ ಜೀವವ
ಕಟ್ಟಿಹಾಕಲಾಗುತ್ತಿಲ್ಲವಲ್ಲೋ.!
-ಎ.ಎನ್.ರಮೇಶ್. ಗುಬ್ಬಿ.

