I ಸಂಚಾರ ನಿಯಮಗಳನ್ನು I ಪಾಲಿಸುವುದು ನಮ್ಮೆಲ್ಲರ ಕರ್ತವ್ಯ I ಶಿವಮೊಗ್ಗ ರಿವರ್ಸೈಡ್ ಅಧ್ಯಕ್ಷ ಕೆ.ಎಸ್.ವಿಶ್ವನಾಥ ನಾಯಕ I
ಶಿವಮೊಗ್ಗ: ಸಂಚಾರ ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ರೋಟರಿ ಕ್ಲಬ್ ಶಿವಮೊಗ್ಗ ರಿವರ್ಸೈಡ್ ಅಧ್ಯಕ್ಷ ಕೆ.ಎಸ್.ವಿಶ್ವನಾಥ ನಾಯಕ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ರಿವರ್ಸೈಡ್ ಹಾಗೂ ರೋಟರಿ ಕ್ಲಬ್ ಮಣಿಪಾಲ್ ಟೌನ್ ಜಂಟಿಯಾಗಿ ಆಯೋಜಿಸಿದ್ದ ಇಂಟರ್ ಜೋನ್ ಫ್ರೆಂಡ್ಶಿಪ್ ಎಕ್ಸ್ಚೇಂಜ್ ಕಾರ್ಯಕ್ರಮದ ಅಂಗವಾಗಿ “ರೋಡ್ ಸೇಫ್ಟಿ ರೈಡ್ ಫಾರ್ ಸೇಫ್ಟಿ” ಶೀರ್ಷಿಕೆಯಡಿ ಟ್ರಾಫಿಕ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಣಿಪಾಲ್ನಿಂದ ಬುಲೆಟ್ ರೈಡ್ ಮಾಡಿಕೊಂಡು ರಸ್ತೆ ಸುರಕ್ಷತೆ ಜಾಗೃತಿ ಸಂದೇಶ ಮೂಡಿಸುತ್ತಿರುವ ಮಣಿಪಾಲ್ ರೋಟರಿ ಸದಸ್ಯರು ಸಮಾಜಕ್ಕೆ ಪ್ರೇರಣೆಯಾಗಿದ್ದಾರೆ. ಇಂತಹ ಜಾಗೃತಿ ರೈಡ್ಗಳು ಕೇವಲ ಬೈಕ್ ಸವಾರಿ ಅಲ್ಲ, ಜನರಲ್ಲಿ ಜವಾಬ್ದಾರಿ ಬಿತ್ತುವ ಸಂದೇಶ ಎಂದು ತಿಳಿಸಿದರು.
ರೋಟರಿ ಮಣಿಪಾಲ್ ಟೌನ್ ಅಧ್ಯಕ್ಷ ಡಾ. ದೀಪಕ್ರಾಮ್ ಬೈರಿ ಮಾತನಾಡಿ, ರಸ್ತೆ ನಮ್ಮೆಲ್ಲರ ಜೀವನದ ಮಾರ್ಗ. ನಿಯಮ ಪಾಲಿಸಿದರೆ ಜೀವ ಉಳಿಯುತ್ತದೆ, ಒಂದು ತಪ್ಪು ಕ್ಷಣ ಕುಟುಂಬವನ್ನೇ ಸಂಕಷ್ಟಕ್ಕೆ ತಳ್ಳಬಲ್ಲದು. ಆದ್ದರಿಂದ ಪ್ರತಿಯೊಬ್ಬರೂ ಸುರಕ್ಷತೆಯನ್ನು ಜೀವನದ ಭಾಗವನ್ನಾಗಿ ಮಾಡಬೇಕು ಎಂದು ಹೇಳಿದರು.
ರೋಟರಿ ಅಸಿಸ್ಟೆಂಟ್ ಗವರ್ನರ್ ಕೆ.ಪಿ. ಶೆಟ್ಟಿ ಮಾತನಾಡಿ, ಟ್ರಾಫಿಕ್ ನಿಯಮ ಪಾಲನೆ ಕಾನೂನುಬದ್ಧ ಕರ್ತವ್ಯ ಮಾತ್ರವಲ್ಲ, ಅದು ಸಾಮಾಜಿಕ ಹೊಣೆಗಾರಿಕೆಯೂ ಆಗಿದೆ. ನಿಯಮ ಪಾಲನೆಯಿಂದ ಅಪಘಾತ ತಡೆಯಬಹುದು, ಸಮಾಜದಲ್ಲಿ ಸುರಕ್ಷತೆ ವೃದ್ಧಿಯಾಗಬಹುದು ಎಂದು ಅಭಿಪ್ರಾಯಪಟ್ಟರು.
ರೋಟರಿ ಮಣಿಪಾಲ್ ಟೌನ್ನಿಂದ 13 ಸದಸ್ಯರು ಬುಲೆಟ್ ರೈಡ್ ಮೂಲಕ ಶಿವಮೊಗ್ಗ ತಲುಪಿದ್ದು, ಬುಲೆಟ್ ರೈಡ್ ಮೂಲಕವೇ ರಸ್ತೆ ಸುರಕ್ಷತೆ ಪ್ರಾಮುಖ್ಯತೆ ಸಾರಿದರು. ಇದರ ಅಂಗವಾಗಿ ನಡೆದ ಜಾಗೃತಿ ಸಭೆಯಲ್ಲಿ ರಸ್ತೆ ನಿಯಮ, ಚಾಲಕರ ಹೊಣೆಗಾರಿಕೆ ಹಾಗೂ ವಾಹನ ಸುರಕ್ಷತೆ ಕುರಿತಂತೆ ಸಾರ್ವಜನಿಕರಿಗೆ ಮನಮುಟ್ಟುವ ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ ಟ್ರಾಫಿಕ್ ನಿಯಮ ಪಾಲನೆ, ವಾಹನ ಸುರಕ್ಷತಾ ಕ್ರಮಗಳು ಹಾಗೂ ಕಾನೂನಾತ್ಮಕ ಜವಾಬ್ದಾರಿಗಳ ಬಗ್ಗೆ ಮಾಹಿತಿ ಹಂಚಲಾಗಿದೆ. ಸಮಾಜಮುಖಿ ಕಾನೂನುಬದ್ಧ ಪ್ರೇರಣಾದಾಯಕವಾದ ಈ ಜಾಗೃತಿ ಕಾರ್ಯಕ್ರಮ “ಸೇಫ್ ಡ್ರೈವ್ ಸೇಫ್ ಲೈಫ್” ಎಂಬ ಸಂದೇಶವನ್ನು ಮೂಡಿಸಲಾಯಿತು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಮಲ್ಲೇಶ್, ಧನರಾಜ್, ನಿತಿನ್, ಶೇಷಪ್ಪ ರೈ, ರೋಟರಿ ಮಣಿಪಾಲ್ ಟೌನ್ ಕಾರ್ಯದರ್ಶಿ ಮೋಹನ್ ನಾಯಕ್, ಡಾ. ಶ್ರೀಧರ್, ಡಾ.ಕುಮಾರ್ ಭಟ್, ಉಮೇಶ್ ರಾವ್, ಹೇಮಂತ್ ಕಾಂತ್, ವಾಸುದೇವ್ ಪೈ ಮತ್ತಿತರರು ಇದ್ದರು.


