I ರಕ್ಷಣಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು I ಪ್ರೇರೆಪಿಸುವ ಯೋಜನೆ ಆಪತ್ತು ಮಿತ್ರ I ದೇವರಾಜ್ I
ಶಿವಮೊಗ್ಗ: ಆಪತ್ತು ಮಿತ್ರ ತರಬೇತಿಯು ಭಾರಿ ದುರ್ಘಟನೆಗಳ ಪರಿಣಾಮಗಳಿಗೆ ನಾವು ಹೇಗೆ ತಯಾರಿ ನಡೆಸುತ್ತೇವೆ, ಪ್ರತಿಕ್ರಿಯೆ ನೀಡುತ್ತೇವೆ ಮತ್ತು ಅದರಿಂದ ಏನು ಕಲಿಯುತ್ತೇವೆ ಎಂಬ ಪ್ರಕ್ರಿಯೆಯಾಗಿದೆ ಎಂದು ಎನ್ಡಿಆರ್ಎಫ್ ಹಿರಿಯ ತರಬೇತುದಾರ ದೇವರಾಜ್ ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ, ಶಿವಮೊಗ್ಗ ಜಿಲ್ಲಾ ಸಂಸ್ಥೆ ಆಶ್ರಯದಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಗ್ನಿ ಮತ್ತು ತುರ್ತು ಸೇವಾ ಇಲಾಖೆ, ಪೊಲೀಸ್ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಸ್ಕೌಟ್ ಭವನದಲ್ಲಿ ಜಿಲ್ಲೆಯ ವಿವಿಧ ಪ್ರಥಮದರ್ಜೆ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಯುವ ವಿಪತ್ತು ಮಿತ್ರ ತರಬೇತಿಯಲ್ಲಿ ಮಾತನಾಡಿದರು.
ರಕ್ಷಣಾ ಪಡೆಗಳು ಬರುವ ಮುಂಚಿತವಾಗಿ ಸ್ಥಳೀಯರು ಅದರಲ್ಲೂ ತರಬೇತಿ ಹೊಂದಿದ ಯುವಜನರು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ತಯಾರು ಮಾಡುವುದೇ ಈ ಯುವ ಆಪತ್ತು ಮಿತ್ರ ಯೋಜನೆಯ ಮೂಲ ಉದ್ದೇಶ ಎಂದು ತಿಳಿಸಿದರು.
2006ರಲ್ಲಿ ಸ್ಥಾಪಿತವಾದ ಎನ್ಡಿಆರ್ಎಫ್ ದೇಶದಾದ್ಯಂತ ಒಟ್ಟು 12 ಬೆಟಾಲಿಯುನ್ ಹೊಂದಿದ್ದು, ಕರ್ನಾಟಕ 10ನೇ ಬೆಟಾಲಿಯನ್ ವಿಜಯವಾಡಕ್ಕೆ ಸೇರಿದ್ದು, ಈವರೆಗೂ ಕರ್ನಾಟಕ ರಾಜ್ಯದ ಹಲವಾರು ಕಡೆಗಳಲ್ಲಿ ಹುಡುಕಾಟ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡು ಬಹಳಷ್ಟು ಜನರನ್ನು ಉಳಿಸಿದೆ ಎಂದು ಹೇಳಿದರು.
ತರಬೇತಿ ಅವಧಿಯಲ್ಲಿ ಸಿಪಿಆರ್, ಪ್ರಾಥಮಿಕ ಮಟ್ಟದ ಶೋಧನೆ ಮತ್ತು ರಕ್ಷಣೆ, ರೋಗಿಯನ್ನು ಹೊತ್ತೊಯುವುದು, ಸಮುದಾಯ ಆಧಾರಿತ ಅರೋಗ್ಯ ಪ್ರಥಮ ಚಿಕಿತ್ಸೆ, ಮೃದು ಆಂಗಾಶದ ಗಾಯ, ಮುಂತಾದ ವಿಚಾರಗಳ ಬಗ್ಗೆ ತಂಡವು ತಿಳಿಸಿಕೊಟ್ಟಿತು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮುಖ್ಯ ಆಯುಕ್ತೆ ಶಕುಂತಲಾ ಚಂದ್ರಶೇಖರ ಮಾತನಾಡಿ ಶಿಬಿರಾರ್ಥಿಗಳಿಗೆ ಹಾರೈಸಿದರು. ಶಿಬಿರದ ಸಂಯೋಜಕ ರಾಜೇಶ್ ವಿ ಅವಲಕ್ಕಿ, ಜಿಲ್ಲಾ ಕಾರ್ಯದರ್ಶಿ ಕೆ.ವಿ.ಚಂದ್ರಶೇಖರಯ್ಯ, ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯ್ ಕುಮಾರ್, ಸಹಾಯಕ ಜಿಲ್ಲಾ ಆಯುಕ್ತ ಮಲ್ಲಿಕಾರ್ಜುನ ಕಾನೂರ್, ಸಹಾಯಕ ರಾಜ್ಯ ಸಂಘಟನಾ ಆಯುಕ್ತೆ ಸುಮನಾ ಶೇಖರ್, ಹಿರಿಯ ಗೈಡರ್ ಶಾಂತಮ್ಮ, ಹಿರಿಯ ಸ್ಕೌಟರ್ ರುದ್ರಪ್ಪ ಚೀಲೂರ್, ಎನ್ಡಿಆರ್ಎಫ್ ತಂಡದ ಮುಖ್ಯಸ್ಥ ವಿವೇಕ್ ಮತ್ತು ಇತರೆ ಸದಸ್ಯರು ಉಪಸ್ಥಿತರಿದ್ದರು. ವಿವಿಧ ಭಾಗಗಳಿಂದ ಆಗಮಿಸಿದ್ದ 162 ವಿದ್ಯಾರ್ಥಿಗಳು ಭಾಗವಹಿಸಿದ್ದರು.

