I ಸೊರಬ ಪಟ್ಟಣದಲ್ಲಿI ಬಿಜೆಪಿ ಯುವ ಮೋರ್ಚಾ ವತಿಯಿಂದ I ತಿರಂಗ ಯಾತ್ರೆ I
ಸೊರಬ: ಬಿಜೆಪಿ ಯುವ ಮೋರ್ಚಾ ವತಿಯಿಂದ ಆಪರೇಷನ್ ಸಿಂಧೂರ ಮತ್ತು ಆಪರೇಷನ್ ಮಹಾದೇವ ಯಶಸ್ವಿಗಾಗಿ ವೀರಯೋಧರಿಗೆ ನಮನ ಹಾಗೂ ೭೮ನೇ ಸ್ವಾತಂತ್ರ್ಯ ದಿನದ ಅಂಗವಾಗಿ ತಿರಂಗ ಯಾತ್ರೆ ಬೈಕ್ ರ್ಯಾಲಿ ಪಟ್ಟಣದಲ್ಲಿ ಮಂಗಳವಾರ ನಡೆಯಿತು.
ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಡಾ. ರಾಜು ಎಂ. ತಲ್ಲೂರು ಮಾತನಾಡಿ, ದೇಶ ಭಕ್ತಿಯನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಮತ್ತು ಸಮಸ್ತ ಭಾರತೀಯರು ಒಂದು ಎಂದು ಜಗತ್ತಿಗೆ ತಿಳಿಸಲು ಪ್ರತಿಯೊಬ್ಬರು ಮನೆಗಳ ಮೇಲೆ ತಿರಂಗವನ್ನು ಹಾರಿಸಬೇಕಿದೆ. ದೇಶ ಭಕ್ತಿಯ ಮುಖೇನ ಸ್ವಾತಂತ್ರ್ಯ ಕಾಪಾಡುವುದು ಮೊದಲ ಆಶಯವಾಗಿದೆ. ಆಪರೇಶನ್ ಸಿಂಧೂರ ಮತ್ತು ಆಪರೇಶನ್ ಮಹಾದೇವ ಯಶಸ್ವಿಗೆ ಕಾರಣರಾದ ದೇಶದ ಸೈನಿಕರಿಗೆ ನಮನ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ಈ ನಿಟ್ಟಿನಲ್ಲಿ ಆ.೧೩ರಿಂದ ೧೫ರವರೆಗೆ ದೇಶದ ಎಲ್ಲಡೆ ಹರ್ ಘರ್ ತಿರಂಗ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು. ಬಿಜೆಪಿ ಮುಖಂಡ ಡಾ. ಎಚ್.ಇ. ಜ್ಞಾನೇಶ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಪ್ರಸ್ತುತ ದೇಶವು ಹಿಂದೆಂದಿಗಿಂತಲೂ ಸದೃಢವಾಗಿದೆ. ಕೇಂದ್ರದಲ್ಲಿ ವಿರೋಧ ಪಕ್ಷದವರು ವಿಭಿನ್ನ ರೀತಿಯಲ್ಲಿ ಚಿತ್ರಿಸಲು ಪ್ರಯತ್ನ ಪಡುತ್ತಿದ್ದಾರೆ. ಬಿಜೆಪಿ ಸ್ನೇಹಕ್ಕೆ ಮತ್ತು ಪ್ರೀತಿಗೆ ಮುಂದಾಳತ್ವ ವಹಿಸುವ ಪಕ್ಷವಾಗಿದೆ. ಇದಕ್ಕೆ ದಿಟ್ಟ ನಿದರ್ಶನ ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾದ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಬಸ್ ಸಂಚಾರ ವ್ಯವಸ್ಥೆ ಕೈಗೊಳ್ಳುವ ಮೂಲಕ ಸ್ನೇಹ ಹಸ್ತವನ್ನು ಚಾಚಲಾಗಿತ್ತು. ಆದರೆ ಪಾಪಿ ಪಾಕಿಸ್ತಾನ ಕಾರ್ಗಿಲ್ನಲ್ಲಿ ಬೆನ್ನಿಗೆ ಚೂರಿ ಹಾಕಿದ್ದನ್ನು ಎಲ್ಲರೂ ಕಂಡಿದ್ದಾರೆ. ಪುಹಲ್ಗಾಮ್ನಲ್ಲಿ ನಡೆದ ಘಟನೆಗೆ ಅಪರೇಶನ್ ಸಿಂಧೂರ ಹೆಸರಲ್ಲಿ ತಕ್ಕ ಉತ್ತರ ನೀಡಲಾಗಿದೆ ಎಂದರು.
ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಆರಂಭವಾದ ಬೈಕ್ ರ್ಯಾಲಿ ಮುಖ್ಯರಸ್ತೆ ಮಾರ್ಗವಾಗಿ ಪುರಸಭೆ ಮುಂಭಾಗದ ವೃತ್ತ, ಕೆಇಬಿ ಕಾಲೋನಿ, ನಂತರ ಪುನಃ ಶ್ರೀ ರಂಗನಾಥ ದೇವಸ್ಥಾನದವರೆಗೆ ಸಾಗಿತು.
ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ರಾಜು ನಾಯ್ಕ್ ಮಾವಿನಬಳ್ಳಿಕೊಪ್ಪ ನೇತೃತ್ವ ವಹಿಸಿದ್ದರು. ಬಿಜೆಪಿ ತಾಲೂಕು ಅಧ್ಯಕ್ಷ ಪ್ರಕಾಶ್ ಅಗಸನಹಳ್ಳಿ, ಮಾಜಿ ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ, ಪ್ರಮುಖರಾದ ಪಾಣಿ ರಾಜಪ್ಪ, ಶಿವಕುಮಾರ ಕಡಸೂರು, ಜಾನಕಪ್ಪ ಒಡೆಯರ್, ವಿಜಯೇಂದ್ರ ಗೌಡ, ಆಶೀಕ್ ನಾಗಪ್ಪ, ಬೆನಕಪ್ಪ, ಸುರೇಶ್ ಉದ್ರಿ, ಸಂದೀಪ ಯಲವಳ್ಳಿ, ನಂದೀಶ ಗೌಡ, ಗೀತಾ ಮಲ್ಲಿಕಾರ್ಜುನ್, ಸುಧಾ ಶಿವಮೂರ್ತಿ, ಮಲ್ಲಿಕಾರ್ಜುನ ದ್ವಾರಹಳ್ಳಿ, ಪ್ರೇಮ್ ಬಿದರಗೇರಿ, ರಮೇಶ್ ಹಸ್ವಿ, ಪುನೀತ, ಹರೀಶ್ ಪ್ರಸನ್ನ ಶೇಟ್ ಚಂದ್ರಗುತ್ತಿ, ಸೇರಿದಂತೆ ಮತ್ತಿತರರಿದ್ದರು.


