I ಕನ್ನಡ ಭಾಷೆಯ ಸಂವರ್ಧನೆಗೆ ವಿಜ್ಞಾನ ಲೇಖಕರ ಕೊಡುಗೆ ಅಪಾರ I ಡಾ. ಶೇಖರ್ ಗೌಳೇರ್ I
ಶಿವಮೊಗ್ಗ: ವಿಜ್ಞಾನವು ಕೇವಲ ಮಾತಿನ ವಿಷಯವಲ್ಲ, ಅದು ಪ್ರಯೋಗ ಮತ್ತು ಸಂಶೋಧನೆಯ ಮೂಲಕ ಮಾನವ ಜೀವನವನ್ನು ಶ್ರೀಮಂತಗೊಳಿಸುವ ಕ್ಷೇತ್ರವಾಗಿದೆ. ವಿಜ್ಞಾನವಿಲ್ಲದೆ ಜಗತ್ತಿನ ಪ್ರಗತಿ ಅಸಾಧ್ಯ. ಕನ್ನಡ ಭಾಷೆಯ ಸಮೃದ್ಧಿಗೆ ವಿಜ್ಞಾನ ಲೇಖಕರು ನೀಡಿರುವ ಕೊಡುಗೆ ಅಪಾರವಾಗಿದೆ ಎಂದು ಖಗೋಳ ತಜ್ಞ ಡಾ. ಶೇಖರ್ ಗೌಳೇರ್ ಹೇಳಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕುಂಸಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ದತ್ತಿ ಕಾರ್ಯಕ್ರಮದಲ್ಲಿ, ದಿ. ಎ. ಶಿವಲಿಂಗಪ್ಪ ಹಾಗೂ ಸಿದ್ದಮ್ಮ ಸ್ಮಾರಕ ದತ್ತಿದಾನಿ ಎ.ಎಸ್. ಹನುಮಾನ್ ಅವರ ಆಶಯದಂತೆ “ಕನ್ನಡ ಸಾಹಿತ್ಯದ ವೈಚಾರಿಕ ಪ್ರಗತಿಗೆ ವಿಜ್ಞಾನ ಸಾಹಿತ್ಯಿಗಳ ಚಿಂತನೆ” ವಿಷಯದ ಕುರಿತು ಉಪನ್ಯಾಸ ನೀಡಿದರು.
ವಿಜ್ಞಾನಿ ಸರ್ ಸಿ.ವಿ. ರಾಮನ್ ಸಮುದ್ರ ಮತ್ತು ಆಕಾಶದ ನೀಲಿ ಬಣ್ಣದ ರಹಸ್ಯವನ್ನು ವೈಜ್ಞಾನಿಕವಾಗಿ ಅನಾವರಣಗೊಳಿಸಿ ನೋಬೆಲ್ ಪ್ರಶಸ್ತಿ ಪಡೆದರು. ಹಾಗೆಯೇ ಕನ್ನಡಿಗರಾದ ಡಾ. ಸುಬ್ರಹ್ಮಣ್ಯನ್ ಚಂದ್ರಶೇಖರ್ ಖಗೋಳ ವಿಜ್ಞಾನ ಕ್ಷೇತ್ರದಲ್ಲಿ ವಿಶ್ವಮಟ್ಟದ ಸಾಧನೆ ಮಾಡಿ ನೋಬೆಲ್ ಪ್ರಶಸ್ತಿಗೆ ಭಾಜನರಾದರು. ಅವರ ಸಾಧನೆಗಳು ಕನ್ನಡಿಗರ ಹೆಮ್ಮೆ ಮಾತ್ರವಲ್ಲ, ಕನ್ನಡದ ವಿಜ್ಞಾನ ಸಾಹಿತ್ಯಕ್ಕೂ ಸ್ಫೂರ್ತಿಯಾಗಿವೆ ಎಂದು ತಿಳಿಸಿದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತ, ಪರಿಸರ ವಿಜ್ಞಾನಿ ಡಾ. ಉಲ್ಲಾಸ ಕಾರಂತ, ಶೃತಿ ಕಾರಂತ, ರಾಷ್ಟ್ರಕವಿ ಕುವೆಂಪು, ಪೂರ್ಣಚಂದ್ರ ತೇಜಸ್ವಿ, ಬಿ.ಜಿ.ಎಲ್. ಸ್ವಾಮಿ, ಡಾ. ಎಚ್. ನರಸಿಂಹಯ್ಯ, ಗುರುಪ್ರಸಾದ್ ಸೇರಿದಂತೆ ಅನೇಕ ವಿಜ್ಞಾನ ಮತ್ತು ಚಿಂತಕರ ಕೃತಿಗಳು ಕನ್ನಡ ಭಾಷೆಯ ಮೂಲಕವೇ ವಿಶ್ವದ ಗಮನ ಸೆಳೆದಿವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಡಿ. ಮಂಜುನಾಥ ಅವರು ಸ್ಥಾಪಿಸಲಾದ ಕಾಗೋಡು ಹೋರಾಟ ದತ್ತಿ ಆಶಯದಂತೆ “ಕಾಗೋಡು ಚಳುವಳಿ – ರೈತರ ಈ ಹೊತ್ತಿನ ತಲ್ಲಣ” ಕುರಿತು ಪತ್ರಕರ್ತರಾದ ನಾಗರಾಜ್ ನೇರಿಗೆ ಮಾತನಾಡಿ, ಜಿಲ್ಲೆಯು ಹೋರಾಟಗಳ ತವರೂರಾಗಿದ್ದು, ಕಾಗೋಡು ಸತ್ಯಾಗ್ರಹವು ಕರ್ನಾಟಕದ ರೈತ ಚಳುವಳಿಯ ಇತಿಹಾಸದಲ್ಲಿ ಮಹತ್ವದ ಅಧ್ಯಾಯವಾಗಿದೆ. ಗೇಣಿದಾರರು ಮತ್ತು ಭೂಮಾಲೀಕರ ನಡುವಿನ ಶೋಷಣೆಯ ವಿರುದ್ಧ ನಡೆದ ಈ ಶಾಂತಿಯುತ ಹೋರಾಟವು ಸಾಮಾಜಿಕ ನ್ಯಾಯದ ಸಂಕೇತವಾಗಿದೆ ಎಂದು ಅವರು ಹೇಳಿದರು.
ಅಂದಿನ ಕಾಲದಲ್ಲಿ ಗೇಣಿದಾರರು ಭೂಮಾಲೀಕರ ಮುಂದೆ ಛತ್ರಿ ಮಡಚಿ, ಮಳೆಯಲ್ಲಿ ನೆನೆಯುತ್ತಾ ನಡೆಯಬೇಕಾಗುತ್ತಿತ್ತು. ಕಾಲಿಗೆ ಹಾಕಿದ್ದ ಚಪ್ಪಲಿಯನ್ನೂ ಕೈಯಲ್ಲಿ ಹಿಡಿದು ಸಾಗಬೇಕಾಗಿತ್ತು. ಇಂತಹ ಅವಮಾನಕಾರಿ ಪರಿಸ್ಥಿತಿಗಳ ವಿರುದ್ಧ ರಕ್ತಪಾತವಿಲ್ಲದೆ ನಡೆದ ಕಾಗೋಡು ಸತ್ಯಾಗ್ರಹವು ರೈತ ಹೋರಾಟದ ಐತಿಹಾಸಿಕ ಮೈಲಿಗಲ್ಲಾಗಿದೆ ಎಂದು ವಿವರಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಲತಾ ಶುಭಕರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳ ಆಚೆಗಿನ ಜ್ಞಾನ, ವಿಜ್ಞಾನ ಮತ್ತು ಇತಿಹಾಸದ ಅರಿವು ಮೂಡಿಸುವ ಇಂತಹ ಕಾರ್ಯಕ್ರಮಗಳು ಅತ್ಯಂತ ಅರ್ಥಪೂರ್ಣವಾಗಿವೆ ಎಂದು ಹೇಳಿದರು. ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಡಿ. ಮಂಜುನಾಥ ಉದ್ಘಾಟಿಸಿ ಮಾತನಾಡಿದರು. ಕುಂಸಿ ಹೋಬಳಿ ಕಸಾಪ ಅಧ್ಯಕ್ಷ ಶಿವಮೂರ್ತಿ, ಜಿಲ್ಲಾ ಕಾರ್ಯದರ್ಶಿಗಳಾದ ಡಿ. ಗಣೇಶ್, ಹೋಬಳಿ ಕಸಾಪ ಕಾರ್ಯದರ್ಶಿ ಪ್ರವೀಣ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಲತಾ ಪ್ರಾರ್ಥಿಸಿ, ವರ್ಷಿಣಿ ಸ್ವಾಗತಿಸಿ, ರೇವತಿ ಕಾರ್ಯಕ್ರಮ ನಿರೂಪಿಸಿ, ಇಂಚರ ವಂದಿಸಿದರು.ರೋಹಿಣಿ ಮತ್ತು ಸಂಗಡಿಗರು ರೈತಗೀತೆ ಹಾಡಿದರು.

